ನವದೆಹಲಿ : ಪಕ್ಷವನ್ನು ಬಲಪಡಿಸಬೇಕು ಎಂದು ಕಾಂಗ್ರೆಸ್ ಯತ್ನಿಸುತ್ತಿದ್ದರೆ, ರಾಹುಲ್ ಗಾಂಧಿ ಅಧ್ಯಕ್ಷಗಿರಿ ವಿರುದ್ಧದ ಅಪಸ್ವರಬಲವಾಗಿ ಕೇಳಿಬರುತ್ತಿದೆ. ಹೀಗಾಗಿ ಭೂಸ್ವಾಧೀನ ಕಾಯ್ದೆ ವಿರೋಧಿ ಅಭಿಯಾನದ ಮೂಲಕ ಮತ್ತೆ ದೇಶದ ಗಮನವನ್ನು ತನ್ನತ್ತ ಸೆಳೆಯಲು ಯತ್ನಿಸಿದ್ದ ಕಾಂಗ್ರೆಸ್ ಗೆ ಈಗ `ಅಧ್ಯಕ್ಷ ಸ್ಥಾನ'ದ ತಲೆನೋವು ಜೋರಾಗುತ್ತಿದೆ.
ಸಂದೀಪ್ ದೀಕ್ಷಿತ್, ಅಂಬಿಕಾ ಸೋನಿ ಬಳಿಕ ಈಗ ಕಾಂಗ್ರೆಸ್ ಸಂಸದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಕಾಂಗ್ರೆಸ್ ಉಪಾಧ್ಯಕ್ಷರ ಬಗೆಗಿನ ಅಸಮಾಧಾನ ಹೊರ ಹಾಕಿದ್ದಾರೆ. ಸೋನಿಯಾ ಅವರೇ ಅಧ್ಯಕ್ಷೆಯಾಗಬೇಕು. ರಾಹುಲ್ ಉಪಾಧ್ಯಕ್ಷರಾಗಿಯೇ ಮುಂದುವರಿಯಲಿ. ಪಕ್ಷವನ್ನು ಒಂದಾಗಿ ಕರೆದೊಯ್ಯುವ ಸಾಮರ್ಥ್ಯವಿರುವುದು ಸೋನಿಯಾಗೆ ಮಾತ್ರ ಎಂದಿದ್ದಾರೆ.
ರಾಹುಲ್ ಗೆ ಅನುಭವದ ಕೊರತೆಯಿದೆ ಎಂದು ಹೇಳಿರುವ ಅಮರಿಂದರ್ ಸಿಂಗ್, ಕೇವಲ 10 ವರ್ಷಗಳಲ್ಲಿ ಯಾರೂ ನೌಕೆಯ ಕ್ಯಾಪ್ಟನ್ ಆಗಲು ಸಾಧ್ಯವಿಲ್ಲ. ರಾಹುಲ್ ಗೆ ಇನ್ನಷ್ಟು ಅನುಭವದ ಅಗತ್ಯವಿದೆ ಎಂದು ಹೇಳಿದ್ದಾರೆ.
ರಾಹುಲ್ ವಾಪಸ್ ಬಂದ ಮೇಲೂ ಮತ್ತಷ್ಟು ಪ್ರಯಾಣ ಮಾಡಬೇಕು. ರಾಹುಲ್ ರಜೆಯಲ್ಲಿ ತೆರಳಿದಾಗಲೇ ಅವರಿಗೆ ನಾನು ಪತ್ರ ಬರೆದು ವಾಪಸ್ ಬರುವಂತೆ ತಿಳಿಸಿದ್ದೆ. ಆದರೆ ಅದಕ್ಕೆ ಅವರ ಉತ್ತರ ಬರಲೇ ಇಲ್ಲ ಎಂದು ತಿಳಿಸಿದ್ದಾರೆ.