ನವದೆಹಲಿ : ಸ್ವಾತಂತ್ರ್ಯ ಹೋರಾಟಗಾರ, ಐ.ಎನ್.ಎ ಸ್ಥಾಪಕ ಸುಭಾಷ್ ಚಂದ್ರ ಬೋಸ್ ಹಾಗೂ ಅವರ ರಾಷ್ಟ್ರೀಯ ಸೇನೆಯ ವಿರುದ್ಧ ತಾವೇ ಖಡ್ಗ ಹಿಡಿದು ಹೋರಾಡುತ್ತೇನೆ ಎಂದಿದ್ದ ಮಾಜಿ ಪ್ರಧಾನಿ ನೆಹರು, ಸುಭಾಷ್ ಚಂದ್ರ ಬೋಸ್ ಹಾಗೂ ಅವರ ಕುಟುಂಬದ ಮೇಲೆ ಬೇಹುಗಾರಿಕೆ ನಡೆಸಿದ್ದರು ಎಂಬ ಅಘಾತಕಾರಿ ಅಂಶ ಹೊರಬಿದ್ದಿದೆ.
ಸುಭಾಷ್ ಚಂದ್ರ ಬೋಸರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆಯ ನಂತರ 1948ರಿಂದ 1968ರವರೆಗೆ ಸುಮಾರು 20 ವರ್ಷಗಳ ಕಾಲ ಜವಾಹರಲಾಲ್ ನೆಹರು, ಬೋಸ್ ಕುಟುಂಬದ ಮೇಲೆ ಗೂಢಾಚಾರಿಕೆ ನಡೆಸಿ ಮಾಹಿತಿ ಸಂಗ್ರಹಿಸಿದ್ದರು ಎಂಬ ಅಂಶ ಬಯಲಾಗಿದೆ ಎಂದು ಇಂಡಿಯಾ ಟುಡೆ ಪತ್ರಿಕೆ ವರದಿ ಮಾಡಿದೆ.
ಇದೀಗ ನೆಹರೂ ಬೇಹುಗಾರಿಕೆ ನಡೆಸಿದ್ದಾರೆ ಎಂಬ ಮಾಹಿತಿಗೆ ಪ್ರತಿಕ್ರಿಯಿಸಿರುವ ಸುಭಾಷ್ ಚಂದ್ರ ಬೋಸರ ಕುಟುಂಬದ ಸದಸ್ಯರು, ಸರ್ಕಾರ ನಡೆಸಿದ ಗೂಢಚಾರಿಕೆಗೆ ಸಂಬಂಧಪಟ್ಟ ರಹಸ್ಯ ದಾಖಲೆಯ ವಿವರವನ್ನು ಪೂರ್ಣವಾಗಿ ಬಹಿರಂಗಗೊಳಿಸಬೇಕೆಂದು ಪಟ್ಟು ಹಿಡಿದಿದ್ದಾರೆ.
ಸುಭಾಷ್ ಚಂದ್ರ ಬೋಸ್ ಅವರ ಅಣ್ಣನ ಮಕ್ಕಳಾದ ಶರತ್ ಚಂದ್ರ ಬೋಸ್ ಹಾಗೂ ಸುಭಾಷ್ ಚಂದ್ರ ಬೋಸ್ ಪತ್ನಿ ಮೇಲೆ ನೆಹರು ಸರ್ಕಾರದ ಐಬಿ ಸತತವಾಗಿ 20 ವರ್ಷ ಗೂಢಚಾರಿಕೆ ನಡೆಸಿತ್ತು. ಸುಭಾಷ್ ಚಂದ್ರ ಬೋಸರ ಪತ್ನಿ, ಬೋಸರ ಕುಟುಂಬಕ್ಕೆ ಬರೆಯುತ್ತಿದ್ದ ಪತ್ರಗಳ ಮೇಲೂ ನೆಹರು ಗೂಢಚಾರಿಕೆ ನಡೆಸಿದ್ದರು ಎಂದು ತಿಳಿದುಬಂದಿದೆ.
ಪ್ರತಿಯೊಂದು ವರದಿಗಳೂ ನೇರವಾಗಿ ನೆಹರೂ 'ಕೈ'ಗೇ ತಲುಪುತ್ತಿತ್ತು ಎಂಬುದು ಗಮನಾರ್ಹ ಅಂಶ ನೇತಾಜಿ ಪುತ್ರಿ ಅನಿತಾ ಬೋಸ್ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ನೆಹರು ಸರ್ಕಾರ ನಮ್ಮ ಕುಟುಂಬದ ಮೇಲೆ ಯಾವ ನಿಲುವು ಹೊಂದಿತ್ತು ಎಂಬುದಕ್ಕೆ ಇದೇ ಸಾಕ್ಷಿ ಎಂದು ಹೇಳಿದ್ದಾರೆ.