ಸನಾ : ಯುದ್ಧಪೀಡಿತ ಯೆಮೆನ್ ನಲ್ಲಿ ಅತಂತ್ರ ಸ್ಥಿತಿಯಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯಾಚರಣೆಯನ್ನು, ಭಾರತದ ನೌಕಾಪಡೆ ಮತ್ತು ವಾಯುಪಡೆಗಳ ಸಿಬಂದಿ ಯುದ್ಧದ ವಾತಾವರಣದಲ್ಲೇ ಮುಂದುವರಿಸಿದ್ದಾರೆ.
ಬಾಂಬ್, ಗುಂಡಿನ ಮೊರೆತ, ಸಾಕಷ್ಟು ಅಡೆತಡೆಗಳ ನಡುವೆ ಮೈನವಿರೇಳಿಸುವ ರೀತಿಯಲ್ಲಿ "ಆಪರೇಷನ್ ರಾಹತ್' ರಕ್ಷಣಾ ಕಾರ್ಯ ನಡೆಯುತ್ತಿದೆ. ರವಿವಾರ ಒಂದೇ ದಿನ 670 ಭಾರತೀಯರನ್ನು ರಕ್ಷಣೆ ಮಾಡಲಾಗಿದ್ದು, ಈ ವರೆಗೆ 2,300 ಭಾರತೀಯರನ್ನು ರಕ್ಷಿಸಿದಂತಾಗಿದೆ.
ಯೆಮೆನ್ ನ ಬಂದರು ನಗರಿಯಾದ ಅದೆನ್ ಪಟ್ಟಣದಲ್ಲಿ ಹುತಿ ಉಗ್ರರು ಮತ್ತು ಸೌದಿ ಅರೇಬಿಯಾ ನೇತೃತ್ವದ ಸರಕಾರಿ ಪಡೆಗಳ ನಡುವೆ ಭಾರೀ ಕಾಳಗ ಏರ್ಪಟ್ಟಿರುವ ಕಾರಣ, ಭಾರತೀಯರ ರಕ್ಷಣೆಗೆಂದು ಆಗಮಿಸಿದ್ದ "ಐ.ಎನ್.ಎಸ್ ಮುಂಬೈ' ಹಡಗಿಗೆ ಬಂದರಿಗೆ ಬರಲಾಗಲಿಲ್ಲ, ಹೀಗಾಗಿ ಬಂದರಿನಿಂದ 5-6 ಕಿಲೋ ಮೀಟರಿನಷ್ಟು ದೂರದಲ್ಲೇ ಸಮುದ್ರದ ನಡುವೆ ಹಡಗನ್ನು ನಿಲ್ಲಿಸಿಕೊಳ್ಳಲಾಯಿತು. ಯೆಮೆನ್ ಮೀನುಗಾರರ ಬೋಟುಗಳನ್ನು ಬಾಡಿಗೆಗೆ ಪಡೆದು ಭಾರತೀಯರನ್ನು ರಕ್ಷಿಸಿ ಗುಂಪು ಗುಂಪಾಗಿ ಬೋಟ್ ನಲ್ಲಿ ಕೂರಿಸಿ "ಐ.ಎನ್.ಎಸ್ ಮುಂಬೈ ಹಡಗಿಗೆ ಕರೆತರಲಾಯಿತು. ಸಣ್ಣ ದೋಣಿಯಿಂದ ಈ ಹಡಗಿಗೆ ಭಾರತೀಯರನ್ನು ಹತ್ತಿಸಿಕೊಳ್ಳಲು ಹಗ್ಗದ ಏಣಿ ಬಳಸಲಾಯಿತು. ಹಗ್ಗದ ಏಣಿ ಹತ್ತಲು ಮಕ್ಕಳು, ಮಹಿಳೆಯರು, ವೃದ್ಧರಿಗೆ ತೊಂದರೆಯಾದರೂ, ನೌಕಾಪಡೆ ಸಿಬಂದಿ ತಮ್ಮ ಧೈರ್ಯ ಮತ್ತು ಕಾರ್ಯಕ್ಷಮತೆಯಿಂದ ಈ ಕಾರ್ಯಕ್ಕೆ ನೆರವಾದರು.
ಇದೇ ವೇಳೆ, ಅಲ್ ಮುಕಲ್ಲಾ ಎಂಬ ಯೆಮೆನ್ ನ ಇನ್ನೊಂದು ಬಂದರು ಅಲ್ ಕಾಯಿದಾ ಉಗ್ರರ ಪಾಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತದಿಂದ ಆಗಮಿಸಿರುವ "ಐ.ಎನ್.ಎಸ್ ಸುಮಿತ್ರಾ' ಹಡಗಿಗೆ ಈ ಬಂದರಿಗೆ ಬರಲಾಗಲಿಲ್ಲ. ಹೀಗಾಗಿ ಬೇರೆ ರಣನೀತಿ ರೂಪಿಸಿದ ನೌಕಾಪಡೆ, ಅಲ್ ಮುಕಲ್ಲಾದಿಂದ 25 ಕಿ.ಮೀ. ದೂರದಲ್ಲಿರುವ ಅಶ್ ಶಿಹ್ ಎಂಬ ಬಂದರಿಗೆ ಸಣ್ಣ ದೋಣಿಗಳಲ್ಲಿ 182 ಭಾರತೀಯರು ಮತ್ತು 21 ವಿದೇಶೀಯರನ್ನು ತಂಡ ತಂಡವಾಗಿ ಕರೆತಂದಿದೆ. ಅಲ್ ಶಿಹ್ ಬಂದರಿಗೆ "ಐ.ಎನ್.ಎಸ್ ಸುಮಿತ್ರಾ' ಹಡಗನ್ನು ತಂದು ಅಲ್ಲಿಂದ ಎಲ್ಲರನ್ನೂ ಪಕ್ಕದ ಆಫ್ರಿಕಾ ಖಂಡದ ಜಿಬೋತಿ ಬಂದರಿಗೆ ಕರೆತರಲಾಗಿದೆ. ಜಿಬೋತಿಯಿಂದ ವಾಯುಪಡೆ ವಿಮಾನದಲ್ಲಿ ಭಾರತೀಯರು ಸ್ವದೇಶಕ್ಕೆ ಮರಳಲಿದ್ದಾರೆ.
ಈ ನಡುವೆ, ಸೌದಿ ವಾಯುದಾಳಿ ಮತ್ತು ಹುತಿ ಉಗ್ರರ ಪ್ರತಿದಾಳಿ ನಡುವೆಯೇ, ಏರ್ ಇಂಡಿಯಾದ 3 ವಿಮಾನಗಳು ಯೆಮೆನ್ ರಾಜಧಾನಿ ಸನಾ ವಿಮಾನ ನಿಲ್ದಾಣದಲ್ಲಿ ಇಳಿಯಲು ಯಶಸ್ವಿಯಾಗಿದ್ದು, 488 ಜನರನ್ನು ಇಲ್ಲಿಂದ ರಕ್ಷಿಸಲಾಗಿದೆ.
ಯುದ್ಧ ಸಂತ್ರಸ್ತ ಯೆಮೆನ್ ನ ಮೊಕಲ್ಲಾ ಪಟ್ಟಣದಿಂದ 11 ಭಾರತೀಯರ ಸಹಿತ 183 ಮಂದಿಯನ್ನು ಪಾಕಿಸ್ಥಾನಿ ನೌಕೆಯೊಂದು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
ಮಾನವೀಯತೆ ದೃಷ್ಟಿಯಿಂದ ಭಾರತೀಯರನ್ನು ರಕ್ಷಿಸಲಾಗಿದೆ ಎಂದು ಪಾಕ್ ಹೇಳಿದೆ.
ಇನ್ನು ಇದೇ ವೇಳೆ, ಭಾರತ ಕೂಡ ತನ್ನ 182 ಜನರ ತಂಡದೊಂದಿಗೆ 7 ದೇಶಗಳ 21 ವಿದೇಶೀಯರನ್ನು ಐ.ಎನ್.ಎಸ್ ಸುಮಿತ್ರಾ ಹಡಗಿನಲ್ಲಿ ಜಬೂತಿ ದೇಶಕ್ಕೆ ಕರೆತಂದು ಅವರ ಪ್ರಾಣರಕ್ಷಣೆ ಮಾಡಿ ಮಾನವೀಯತೆ ಮೆರೆದಿದೆ.
ಸುಮಾರು 4,000 ಭಾರತೀಯರ ಪೈಕಿ ಈವರೆಗೆ 34 ಕನ್ನಡಿಗರು ಸೇರಿ 2,300 ಜನರನ್ನು ರಕ್ಷಿಸಿದಂತಾಗಿದ್ದು, ಇನ್ನು 1,700 ಜನರ ರಕ್ಷಣೆ ಬಾಕಿ ಇದೆ. ಜಿಬೋತಿ ದೇಶದಲ್ಲಿ ವಾಸ್ತವ್ಯ ಹೂಡಿರುವ ವಿದೇಶಾಂಗ ಖಾತೆ ರಾಜ್ಯ ಸಚಿವ, ಮಾಜಿ ರಕ್ಷಣಾ ಮುಖ್ಯಸ್ಥ ಜ| ವಿ.ಕೆ. ಸಿಂಗ್ ಇಡೀ ರಕ್ಷಣಾ ಕಾರ್ಯದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದು, ಧೈರ್ಯ ತುಂಬುತ್ತಿದ್ದಾರೆ.