ಸ್ಪೇನ್ : ಇತ್ತೀಚೆಗಷ್ಟೇ ಕದನಗ್ರಸ್ತ ಯಮೆನ್ ನಲ್ಲಿದ್ದ ತಮ್ಮ ಪ್ರಜೆಗಳನ್ನು ಕಾಪಾಡಲು ಅಮೆರಿಕಾ ಸೇರಿದಂತೆ ಅನೇಕ ರಾಷ್ಟ್ರಗಳು ಭಾರತ ಸರ್ಕಾರ ಸಹಾಯ ಕೋರಿದ್ದವು. ಇದೀಗ ಭೂಕಂಪ ಪೀಡಿತ ನೇಪಾಳದಲ್ಲಿ ಸಿಲುಕಿರುವ ತಮ್ಮ ದೇಶದ ಪ್ರಜೆಗಳನ್ನು ರಕ್ಷಣೆ ಮಾಡಬೇಕು ಎಂದು ಕೆಲವು ರಾಷ್ಟ್ರಗಳು ಭಾರತಕ್ಕೆ ಮನವಿ ಮಾಡಿವೆ.
ನೇಪಾಳದಲ್ಲಿ ಸ್ಪೇನ್ ಮೂಲದ 340 ನಾಗರಿಕರು ಸಿಲುಕಿಕೊಂಡಿದ್ದು, ಅವರ ರಕ್ಷಣೆಯ ಜವಾಬ್ದಾರಿ ಭಾರತ ಸರ್ಕಾರದ ಹೆಗಲೇರಿದೆ. ನಾಗರಿಕರ ಸುರಕ್ಷತೆ ಸ್ಪೇನ್ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ್ದು, ಭಾರತ ಸರ್ಕಾರದ ಸಹಾಯ ಬೇಡಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವ ಸ್ಪೇನ್ ಸಚಿವ, ಭಾರತದ ನಾಗರಿಕರೊಂದಿಗೆ ತಮ್ಮ ನಾಗರಿಕರನ್ನೂ ರಕ್ಷಣೆ ಮಾಡಲು ಸೂಚನೆ ನೀಡಬೇಕೆಂದು ಮನವಿ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಎದುರಾದ ವಿಪತ್ತುಗಳನ್ನು ಸಮರ್ಥವಾಗಿ ಎದುರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ, ಸಾರ್ಕ್ ರಾಷ್ಟ್ರಗಳ ಪಾಲಿಗೆ ಹಿರಿಯಣ್ಣನಂತೆ ಕಾರ್ಯನಿರ್ವಹಿಸುತ್ತಿದೆ. ಭಾರತ ಸರ್ಕಾರ ರಕ್ಷಣಾ ಕಾರ್ಯಾಚರಣೆಯಲ್ಲಿ ಚುರುಕಾಗಿರುವ ಹಿನ್ನೆಲೆಯಲ್ಲಿ ಯಾವುದೇ ದೇಶದ ನಾಗರಿಕರಾದೂ ವಿಪತ್ತುಗಳಲ್ಲಿ ಸಿಲುಕಿಕೊಂಡಿದ್ದರೂ ಮೊದಲು ಭಾರತ ಸರ್ಕಾರಕ್ಕೆ ಮನವಿ ಬರಲು ಪ್ರಾರಂಭವಾಗಿದೆ. ಯಮೆನ್ ನಲ್ಲಿ ಭಾರತದ ನಾಗರಿಕರೊಂದಿಗೆ, ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳ ನಾಗರಿಕರನ್ನು ಭಾರತ ಸರ್ಕಾರ ರಕ್ಷಿಸಿತ್ತು.