ನವದೆಹಲಿ : ಬಹುಕೋಟಿ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿ ಗೆ ನೀಡಲಾಗಿದ್ದ ಸಮನ್ಸ್ ಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಹಿಂಡಾಲ್ಕೊ ಕಂಪೆನಿಯ ಜಂಟಿ ಉದ್ಯಮಕ್ಕೆ ಒಡಿಶಾದ ದ್ವಿತೀಯ ತಲಬಿರಾ ಕಲ್ಲಿದ್ದಲು ನಿಕ್ಷೇಪವನ್ನು ಅಕ್ರಮವಾಗಿ ಹಂಚಿಕೆ ಮಾಡಲಾದ ಹಗರಣಕ್ಕೆ ಸಂಬಂಧಿಸಿ ವಿಚಾರಣಾ ನ್ಯಾಯಾಲಯ ಮನಮೋಹನ್ ಸಿಂಗ್ ಗೆ ಸಮನ್ಸ್ ಜಾರಿ ಮಾಡಿತ್ತು.ಈ ಸಮನ್ಸ್ಗೆ ಸುಪ್ರೀಂ ಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದ್ದು, ಸಿಬಿಐಗೆ ನೊಟೀಸ್ ಜಾರಿ ಮಾಡಿದೆ. ಇದರಿಂದ ಸಿಂಗ್ ಗೆ ಸದ್ಯಕ್ಕೆ ರಿಲೀಫ್ ಸಿಕ್ಕಿದಂತಾಗಿದೆ.
2005ರಲ್ಲಿ ಒಡಿಶಾದಲ್ಲಿನ ದ್ವಿತೀಯ ತಲಬಿರಾ ಕಲ್ಲಿದ್ದಲು ನಿಕ್ಷೇಪದ ಅಕ್ರಮ ಹಂಚಿಕೆ ಹಗರಣದಲ್ಲಿ ಎ.8ರಂದು ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿ ವಿಶೇಷ ಸಿಬಿಐ ನ್ಯಾಯಾಲಯವು ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕೈಗಾರಿಕೋದ್ಯಮಿ ಕುಮಾರ ಮಂಗಲಂ ಬಿರ್ಲಾ, ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಪಿ.ಸಿ ಪಾರೇಖ್ ಮತ್ತು ಇತರ ಮೂವರಿಗೆ ಸಮನ್ಸ್ ಜಾರಿ ಮಾಡಿತ್ತು.
ಭ್ರಷ್ಟಾಚಾರ ತಡೆ ಕಾಯಿದೆ ಹಾಗೂ ಭಾರತೀಯ ದಂಡ ಸಂಹಿತೆಯ ಸೆ.120ಬಿ ಮತ್ತು ಸೆ.409ರ ಅನ್ವಯ ಶಿಕ್ಷಿಸಬಹುದಾದ ಅಪರಾಧಗಳ ವಿಚಾರಣೆಗೆ ಸಂಬಂಧಿಸಿದಂತೆ ವಿಶೇಷ ಸಿಬಿಐ ಕೋರ್ಟಿನ ನ್ಯಾಯಾಧೀಶ ಭರತ್ ಪರಾಶರ್ ಅವರು ಮನಮೋಹನ್ ಸಿಂಗ್ ಮತ್ತು ಇತರ ಆರು ಮಂದಿ ಆರೋಪಿಗಳಿಗೆ ಎ.8ರಂದು ತಮ್ಮ ನ್ಯಾಯಾಲಯದಲ್ಲಿ ಹಾಜರಿರುವಂತೆ ಆದೇಶಿಸಿ ಸಮನ್ಸ್ ಜಾರಿ ಮಾಡಿದ್ದರು.
ತಲಬಿರಾ ಕಲ್ಲಿದ್ದಲು ನಿಕ್ಷೇಪವನ್ನು ಹಿಂಡಾಲ್ಕೋ ಕಂಪೆನಿಗೆ ನೀಡುವಂತೆ 2005ರ ಮೇ 7 ಹಾಗೂ 2005ರ ಜೂನ್ 17ರಂದು ಕೈಗಾರಿಕೋದ್ಯಮಿ ಬಿರ್ಲಾ ಅವರು ಕಲ್ಲದ್ದಲು ಸಚಿವಾಲಯ ಮತ್ತು ಪ್ರಧಾನಿ ಕಾರ್ಯಾಲಯಕ್ಕೆ ಎರಡು ಪತ್ರಗಳನ್ನು ಬರೆದ ವಿದ್ಯಮಾನದಲ್ಲಿನ ಬೆಳವಣಿಗೆಗೆ ಸಂಬಂಧಪಟ್ಟು ಸಿಬಿಐ ತನಿಖಾ ತಂಡ ಈ ವರ್ಷ ಜನವರಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ಪ್ರಶ್ನಿಸಿ ಮಾಹಿತಿ ಸಂಗ್ರಹಿಸಿತ್ತು.
ಆ ಬಳಿಕ ಸಿಬಿಐ ಈ ಹಗರಣದಲ್ಲಿ ತನ್ನ ಅಂತಿಮ ವರದಿಯನ್ನು ಸಲ್ಲಿಸಿತ್ತು. ಇದನ್ನು ಅನುಸರಿಸಿ ಸಿಬಿಐ ವಿಶೇಷ ನ್ಯಾಯಾಲಯವು ಸಿಂಗ್ ಮತ್ತು ಇತರ ಆರು ಮಂದಿಗೆ ಈ ಹಗರಣದ ಆರೋಪಿಗಳಾಗಿ ಎ.8ರಂದು ತನ್ನ ಮುಂದೆ ನಡೆಯಲಿರುವ ವಿಚಾರಣೆಗೆ ಹಾಜರಿರುವಂತೆ ಆದೇಶಿಸಿ ಸಮನ್ಸ್ ಜಾರಿ ಮಾಡಿತ್ತು.