ಬೆಂಗಳೂರು : ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡುವ ಸಂಬಂಧ ಎಲ್ಲ ರಾಜ್ಯದ ಮುಖ್ಯಮಂತ್ರಿಗಳ ಹಾಗೂ ಸರ್ವಪಕ್ಷ ನಿಯೋಗವನ್ನು ಪ್ರಧಾನಿ ಬಳಿ ಕೊಂಡೊಯ್ಯಲು ಪ್ರತಿಪಕ್ಷಗಳು ವಿಧಾನಸಭೆಯಲ್ಲಿಂದು ಆಗ್ರಹಿಸಿದವು.
ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ, ಜೆಡಿಎಸ್ನ ಉಪನಾಯಕ ವೈಎಸ್ವಿ ದತ್ತಾ ಅವರು ಈ ಪ್ರಸ್ತಾವನೆಯನ್ನು ಮುಂದಿಟ್ಟರು. ಒಂದರಿಂದ ಐದನೇ ತರಗತಿವರೆಗೆ ರಾಜ್ಯದಲ್ಲಿನ ಮಗುವಿನ ಮಾತೃಭಾಷೆ ಅಥವಾ ಕನ್ನಡಲ್ಲಿ ಶಿಕ್ಷಣ ಪಡೆಯಲು ಅವಕಾಶ ನೀಡುವ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯಲು ಮಕ್ಕಳ ಹಕ್ಕು (ಕರ್ನಾಟಕ ತಿದ್ದುಪಡಿ) ವಿಧೇಯಕವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಮಂಡಿಸಿದರು.
ನಂತರ ಮಾತನಾಡಿದ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡಬೇಕು ಎಂಬುದು ಚರ್ಚೆಯಾಗುತ್ತಿದೆ. ಸರ್ಕಾರಿ ಶಾಲೆಗಳಿಗೆ ಛೀಮಾರಿ ಹಾಕುವ ಪರಿಸ್ಥಿತಿ ನಿರ್ಮಾಣವಾಗಿ ಖಾಸಗಿ ಶಾಲೆಗಳ ಕಡೆ ಪೋಷಕರು ಹಾಗೂ ವಿದ್ಯಾರ್ಥಿಗಳು ಮುಖ ಮಾಡಿದ್ದಾರೆ. ಮೂಲಭೂತ ಸೌಲಭ್ಯವನ್ನು ಸರ್ಕಾರ ಕಲ್ಪಿಸಿದರೆ, ಖಾಸಗಿ ಶಾಲೆಗಳಿಗೆ ಹೋಗುವ ಪರಿಸ್ಥಿತಿ ಎದುರಾಗುವುದಿಲ್ಲ. ಸುಪ್ರೀಂ ಕೋರ್ಟ್ನ ತೀರ್ಪಿನ ಪ್ರಕಾರ ಪೋಷಕರು ಇಷ್ಟ ಬಂದ ಮಾಧ್ಯಮದಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸುವ ಹಕ್ಕಿದೆ. ದಕ್ಷಿಣ ಭಾರತ ಮುಖ್ಯಮಂತ್ರಿಗಳ ಹಾಗೂ ಸರ್ವಪಕ್ಷಗಳ ನಿಯೋಗವನ್ನು ಕೇಂದ್ರ ಸರ್ಕಾರದ ಬಳಿಗೆ ಕೊಂಡೊಯ್ಯಬೇಕು. ಪ್ರಧಾನಿ ಅವರ ಮೇಲೆ ಒತ್ತಡ ತಂದು ಸಂಸತ್ತಿನಲ್ಲಿ ವಿಧೇಯಕವನ್ನು ತರುವಂತೆ ಮಾಡಬೇಕು ಎಂದರು.
ಇದಕ್ಕೆ ದನಿಗೂಡಿಸಿದ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ , ಸುಪ್ರೀಂ ಕೋರ್ಟ್ ತೀರ್ಪು ಬರುವ ಮುನ್ನ ಅಭಿಪ್ರಾಯ ಸಂಗ್ರಹಿಸಬೇಕಾಗಿತ್ತು. ನಾಡಿನ ಅಥವಾ ರಾಜಭಾಷೆ ಬಗ್ಗೆ ಉದಾಸೀನ ತೋರದೆ ಜಾಗೃತರಾಗಿರಬೇಕು. ಶಿಕ್ಷಣ ಮಾಧ್ಯಮಕ್ಕೆ ಸಂಬಂಧಿಸಿದಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವ ನೇತೃತ್ವವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ವಹಿಸಬೇಕು ಎಂದರು.
ಪ್ರಧಾನಿಯವರು ಈ ಸಂಬಂಧ ಸಕಾರಾತ್ಮಕವಾಗಿ ಸ್ಪಂಧಿಸುವ ವಿಶ್ವಾಸವಿದ್ದು, ರಾಜ್ಯಗಳ ಅಭಿಪ್ರಾಯ ನಿರೀಕ್ಷಿಸುತ್ತಿದ್ದಾರೆ. ರಾಜ್ಯಭಾಷೆ ಉಳಿವಿಗೆ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಇಲ್ಲದಿದ್ದರೆ ಈ ವಿಧೇಯಕ ಕಣ್ಣೊರೆಸುವ ತಂತ್ರವಾಗಲಿದೆ ಎಂದರು.
ಬೇರೆ ಭಾಷೆ ಪ್ರಥಮ ಭಾಷೆಯಾಗಿ ಕಲಿಯುವ ಮಕ್ಕಳಿಗೆ ತೃತೀಯ ಭಾಷೆಯಾಗಿ ಕನ್ನಡ ಕಲಿಯುವ ಅವಕಾಶ ಕಲ್ಪಿಸಬೇಕು. ಐದನೇ ತರಗತಿಯಿಂದ ಇಂಗ್ಲೀಷ್ ಚೆನ್ನಾಗಿ ಕಲಿಸುವ ಶಿಕ್ಷಕರನ್ನು ನೇಮಕ ಮಾಡಬೇಕು. ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರೆಯಬೇಕು ಎಂಬ ಸಲಹೆ ಮಾಡಿದರು. ಜೆಡಿಎಸ್ನ ಉಪನಾಯಕ ವೈಎಸ್ವಿ ದತ್ತಾ ಮಾತನಾಡಿ, ತಾರ್ತಿಕವಾಗಿ ಈ ವಿಧೇಯಕವೂ ಪರಿಹಾರ ನೀಡುವುದಿಲ್ಲ. ಆದರೂ ಈ ವಿಧೇಯಕ ಸ್ವಾಗತಾರ್ಹ. ಇತರೆ ರಾಜ್ಯಗಳಿಗೆ ಮಾದರಿಯಾಗಲಿದೆ. ಸಂಸತ್ತಿನಲ್ಲಿ ಸಂವಿಧಾನ ತಿದ್ದುಪಡಿ ಆಗುವವರೆಗೂ ಸ್ಪಷ್ಟ ಪರಿಹಾರ ಸಿಗುವುದಿಲ್ಲ. ಇದರಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡದ ತಂತ್ರಗಳನ್ನು ಅನುಸರಿಸಬೇಕು. ಏಕರೂಪ ಶಿಕ್ಷಣ ಜಾರಿಗೆ ಬರಬೇಕು ಎಂದರು.