ನವದೆಹಲಿ : 'ಪಾಕಿಸ್ತಾನ' ಹಾಗೂ ಭಾರತ ದೇಶಗಳ ನಡುವೆ ಶಾಂತಿಯ ವಾತಾವರಣ ಮೂಡಿಸಲು ಪಾಕಿಸ್ತಾನದ ಹೆಣ್ಣುಮಕ್ಕಳ ಶಿಕ್ಷಣ ಪರ ಹೋರಾಟಗಾರ್ತಿ ಮಲಾಲಾ ಯುಸುಫ್ ಝೈ ಹಾಗೂ ತಾವು ಕೆಲಸ ಮಾಡಬೇಕಿದೆ ಎಂದು ನೊಬೆಲ್ ಶಾಂತಿ ಪ್ರಶಸ್ತಿ ಭಾಜನರಾಗಿರುವ ಕೈಲಾಶ್ ಸತ್ಯಾರ್ಥಿ ತಿಳಿಸಿದ್ದಾರೆ.
ಪಾಕಿಸ್ತಾನದ ಹೆಣ್ಣು ಮಕ್ಕಳ ಶಿಕ್ಷಣ ಪರ ಹೋರಾಟಗಾರ್ತಿ ಮಲಾಲಾ ಯುಸೂಫ್ ಝೈ, ಅವರೊಂದಿಗೆ ವಿಶ್ವದ ಸರ್ವೋಚ್ಛ ಶಾಂತಿ ಪುರಸ್ಕಾರ ಹಂಚಿಕೊಂಡಿರುವ ಭಾರತದ ಮಕ್ಕಳ ಹಕ್ಕು ಹೋರಾಟಗಾರ ಕೈಲಾಶ್ ಸತ್ಯಾರ್ಥಿ, ನಾನು ಪಾಕ್ ಯುವತಿಯೊಂದಿಗೆ ಮಾತನಾಡಿದ್ದು, ನಾವು ಇಬ್ಬರೂ ಎರಡು ದೇಶಗಳ ಶಾಂತಿಗಾಗಿ ಕೆಲಸ ಮಾಡಬೇಕಿದೆ ಎಂದು ಹೇಳಿರುವುದಾಗಿ ಶನಿವಾರ ತಿಳಿಸಿದ್ದಾರೆ.
ನೊಬೆಲ್ ಪ್ರಶಸ್ತಿ ದೊರೆತಿರುವ ಹಿನ್ನೆಲೆಯಲ್ಲಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿರುವ ಕೈಲಾಶ್ ಸತ್ಯಾರ್ಥಿ ಅವರು, ಪ್ರಶಸ್ತಿ ಪ್ರಕಟವಾದ ನಂತರ ನಾನು ಮಲಾಲಾ ಅವರೊಂದಿಗೆ ಮಾತನಾಡಿದ್ದು, ಎರಡು ದೇಶಗಳ ಶಾಂತಿಗಾಗಿ ನಾವು ಕೆಲಸ ಮಾಡಬೇಕು ಎಂದು ಹೇಳಿದ್ದೇನೆ. ಮಲಾಲಾ ನನ್ನ ಮಗಳಿದ್ದಂತೆ, ನಾವಿಬ್ಬರೂ ಮಕ್ಕಳ ಹಕ್ಕಿಗಾಗಿ ಹೋರಾಟ ಮುಂದುವರೆಸುತ್ತೇವೆ ಎಂದು ಸತ್ಯಾರ್ಥಿ ಹೇಳಿದ್ದಾರೆ.
ಕಾಶ್ಮೀರ ಗಡಿಯಲ್ಲಿ ಯುದ್ಧ ಸ್ಥಿತಿ ನಿರ್ಮಾಣವಾಗಿರುವ ಹೊತ್ತಿನಲ್ಲೇ ಭಾರತ ಮತ್ತು ಪಾಕಿಸ್ತಾನದ ಈ ಇಬ್ಬರು ಮಕ್ಕಳ ಪರ ಹೋರಾಟಗಾರರಿಗೆ ಜಂಟಿಯಾಗಿ 2014ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರ ನೀಡಲಾಗಿರುವುದು ವಿಶೇಷ