ನಾಗಪುರ : ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಕಡ್ಡಾಯಗೊಳಿಸುವ ಸಂಬಂಧ ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂದು ಕರ್ನಾಟಕ ಸರ್ಕಾರ ಆಗ್ರಹಿಸುತ್ತಿರುವಾಗಲೇ, ಆರ್ ಎಸ್ ಎಸ್ ನ ಪರಮೋಚ್ಚ ನೀತಿ ನಿರೂಪಣಾ ಸಂಸ್ಥೆಯಾದ ಅಖೀಲ ಭಾರತೀಯ ಪ್ರತಿನಿಧಿ ಸಭೆ ಮಾತೃಭಾಷಾ ಶಿಕ್ಷಣದ ಪರ ನಿರ್ಣಯ ಅಂಗೀಕರಿಸಿದೆ. ಇದರಿಂದಾಗಿ ಕರ್ನಾಟಕ ಸರ್ಕಾರದ ಹೋರಾಟಕ್ಕೆ ಮತ್ತಷ್ಟು ಬಲ ದೊರೆತಂತಾಗಿದೆ.
ಮಾತೃಭಾಷೆ ಅಥವಾ ಸಂವಿಧಾನದಿಂದ ಮಾನ್ಯತೆ ಪಡೆದ ರಾಜ್ಯಭಾಷೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವ ಸಂಬಂಧ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂಬ ನಿರ್ಣಯವನ್ನು ಭಾನುವಾರ ಅಖೀಲ ಭಾರತೀಯ ಪ್ರತಿನಿಧಿ ಸಭಾ ಅಂಗೀಕರಿಸಿದೆ.
ಮಹಾತ್ಮ ಗಾಂಧಿ, ಮದನ ಮೋಹನ ಮಾಳವೀಯ, ರವೀಂದ್ರನಾಥ ಟ್ಯಾಗೋರ್, ಬಿ.ಆರ್. ಅಂಬೇಡ್ಕರ್ ಹಾಗೂ ಎಸ್. ರಾಧಾಕೃಷ್ಣನ್ ಅವರಂತಹ ಚಿಂತಕರು, ಸಿ.ವಿ. ರಾಮನ್, ಪಿ.ಸಿ.ರೇ ಹಾಗೂ ಜೆ.ಸಿ.ಬೋಸ್ ಅವರಂತಹ ವಿಜ್ಞಾನಿಗಳು ಕೂಡ ಮಾತೃಭಾಷೆಯಲ್ಲಿ ಶಿಕ್ಷಣ ಕಲಿಯುವುದು ವೈಜ್ಞಾನಿಕ ಹಾಗೂ ಸ್ವಾಭಾವಿಕವಾಗಿದೆ ಎಂದು ಹೇಳಿದ್ದಾರೆ. ರಾಧಾಕೃಷ್ಣನ್ ಆಯೋಗ ಹಾಗೂ ಕೊಠಾರಿ ಆಯೋಗಗಳೂ ಈ ಕುರಿತು ಶಿಫಾರಸು ಮಾಡಿವೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಾಲಿ ಇರುವ ಭಾಷಾ ನೀತಿಯನ್ನು ಪುನಾಪರಿಶೀಲಿಸಿ, ಮಾತೃಭಾಷೆಯಲ್ಲೇ ಪರಿಣಾಮಕಾರಿ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಬೇಕು. ಶಿಕ್ಷಣ, ಆಡಳಿತ ಹಾಗೂ ನ್ಯಾಯದಾನದಲ್ಲೂ ಭಾರತೀಯ ಭಾಷೆಗಳು ಬಳಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ನಿರ್ಣಯ ಹೇಳುತ್ತದೆ.
ಈ ಮಧ್ಯೆ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣ ಮಾಡುವ ಬದ್ಧತೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಬಿಟ್ಟಿಲ್ಲ. ಹಾಗಂತ ಅದಕ್ಕಾಗಿ ಸದ್ಯಕ್ಕೆ ಯಾವುದೇ ಆಂದೋಲನವನ್ನೂ ಆರಂಭಿಸುವುದಿಲ್ಲ ಎಂದು ಆರ್ ಎಸ್ ಎಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ನಾಜಿ ಜೋಶಿ ತಿಳಿಸಿದ್ದಾರೆ.