ನವದೆಹಲಿ : ಪ್ರತಿಪಕ್ಷಗಳು, ವಿವಿಧ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿರುವ ಎನ್ ಡಿಎ ಸರ್ಕಾರದ ಭೂ ಸ್ವಾಧೀನ ಮಸೂಧೆ ಸುಗ್ರೀವಾಜ್ಞೆ ಅವಧಿ ಇದೇ ಏ.5ರಂದು ತನ್ನಿಂದ ತಾನಾಗಿಯೇ ರದ್ದುಗೊಳ್ಳಲಿದೆ.
ಈ ಸುಗ್ರೀವಾಜ್ಞೆ ಘೋಷಿಸಿ, ಏ.5ಕ್ಕೆ ಆರು ತಿಂಗಳು ಪೂರ್ಣವಾಗಲಿದ್ದು, ಬಜೆಟ್ ಅಧಿವೇಶನದಲ್ಲಿ ಒಳಗೆ ಸದನದಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳಬೇಕಿತ್ತು. ಸದ್ಯ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಪಾಸಾಗಿದ್ದರೂ ರಾಜ್ಯಸಭೆಯಲ್ಲಿ ಬಿಜೆಪಿಗೆ ಬಹುಮತ ಇಲ್ಲದ್ದರಿಂದ ಸ್ಥಗಿತಗೊಂಡಿದೆ.
ತಿದ್ದುಪಡಿ ಮಸೂದೆಗೆ ಅನುಮೋದನೆ ಪಡೆದುಕೊಳ್ಳಲೇ ಬೇಕೆಂದಿದ್ದರೆ, ಸಂಸತ್ ಕಲಾಪ ಅವಧಿಯನ್ನು ಏ.20ರವರೆಗೆ ವಿಸ್ತರಣೆ ಮಾಡಿಕೊಳ್ಳಬಹುದಿತ್ತು. ಆದರೆ ಸರ್ಕಾರ ಅಂತಹ ನಿರ್ಧಾರಕ್ಕೇನೂ ಬಂದಿಲ್ಲ. ಅಲ್ಲದೇ, ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಮತ್ತೆ ಸುಗ್ರೀವಾಜ್ಞೆ ಹೊರಡಿಸುವ ಇರಾದೆಯನ್ನೂ ಸರ್ಕಾರ ಹೊಂದಿಲ್ಲ. ಬದಲಾಗಿ ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಚಿಂತಿಸುವ ಬಗ್ಗೆ ಅಭಿಪ್ರಾಯ ಹೊಂದಿದೆ. ಅಲ್ಲದೇ ಸದ್ಯ ಭೂ ಸ್ವಾಧೀನ ಪಡಿಸಿಕೊಳ್ಳಲೇಬೇಕಾದ ಅಂತಹ ದೊಡ್ಡ ಯೋಜನೆಗಳೇನೂ ಇಲ್ಲ. ಒಂದು ವೇಳೆ ತಿದ್ದುಪಡಿ ಮಸೂದೆಗೆ ಅಂಗೀಕಾರ ಪಡೆದುಕೊಂಡರೂ, ಹೊಸ ಕಾಯ್ದೆ ಅನ್ವಯ ಭೂ ಸ್ವಾಧೀನ ಪಡಿಸಿಕೊಳ್ಳಬಹುದಾದ ಕಾಯ್ದೆಗಳೇನು ರಾಜ್ಯ ಸರ್ಕಾರಗಳ ಬಳಿ ಇಲ್ಲ. ಆದ್ದರಿಂದ ಮುಂದಿನ ಅಧಿವೇಶನದ ವೇಳೆಗೆ ಸರ್ಕಾರ ಮಸೂದೆ ಬಗ್ಗೆ ಪರಾಮರ್ಶಿಸಿ ಪಾಸು ಮಾಡುವ ಇರಾದೆ ಹೊಂದಿದೆ ಎನ್ನಲಾಗಿದೆ.