ನವದೆಹಲಿ : ಕೇಂದ್ರ ಸಚಿವ ಸಂಪುಟವು ಶಿಫಾರಸ್ಸು ಮಾಡಿ ಕಳುಹಿಸಿದ್ದ ವಿವಾದಿತ ಭೂಸ್ವಾಧೀನ ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳು ಮೂರನೇ ಬಾರಿಗೆ ಅಂಕಿತ ಹಾಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಂಪುಟ ಸಭೆಯಲ್ಲಿ ವಿಧೇಯಕವನ್ನು ಮತ್ತೆ ಹೊರಡಿಸಲು ತೀರ್ಮಾನಿಸಲಾಯಿತು. ಭೂಮಿ ಕಳೆದುಕೊಳ್ಳುವ ರೈತರಿಗೆ ನೀಡಬೇಕಾಗಿರುವ ಪರಿಹಾರಕ್ಕೆ ಒಂದು ಸ್ಪಷ್ಟವಾದ ಚೌಕಟ್ಟನ್ನು ಒದಗಿಸುವ ಕುರಿತು ವಿಧೇಯಕದಲ್ಲಿ ವಿವರಿಸಿ ಅದನ್ನು ಮತ್ತೆ ರಾಷ್ಟ್ರಪತಿಗಳ ಅನುಮೋದನೆಗೆ ಕಳುಹಿಸಲಾಯಿತು.
ಇದಕ್ಕೆ ಮತ್ತೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕೇಂದ್ರ ಸಚಿವ ಸಂಪುಟವು ವಿವಾದಿತ ಭೂ ಸ್ವಾಧೀನ ಮಸೂದೆ ಸುಗ್ರೀವಾಜ್ನೆಯನ್ನು ಮೂರನೇ ಬಾರಿಗೆ ಹೊರಡಿಸಲು ಶಿಫಾರಸು ಮಾಡಿದೆ.
ಎನ್.ಡಿ.ಎ ಸರ್ಕಾರ 2014 ರ ಡಿಸೆಂಬರ್ ನಲ್ಲಿ ಮೊದಲ ಬಾರಿಗೆ ಭೂ ಸ್ವಾಧೀನ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿತ್ತು. ಆದರೆ ರಾಜ್ಯಸಭೆಯಲ್ಲಿ ಈ ಮಸೂದೆಗೆ ಬಹುಮತ ಸಿಗದ ಕಾರಣ ಸರ್ಕಾರ ಮಸೂದೆಯನ್ನು ರಾಜ್ಯಸಭೆಗೆ ಕಳುಹಿಸಿರಲಿಲ್ಲ.
ನಂತರ 2015ರ ಮಾರ್ಚ್ ತಿಂಗಳಿನಲ್ಲಿ ಎರಡನೇ ಬಾರಿಗೆ ಮಸೂದೆಯನ್ನು ಮಂಡಿಸಲಾಗಿತ್ತು. ಮಸೂದೆಗೆ ಮೇಲ್ಮನೆಯಲ್ಲಿ ಒಪ್ಪಿಗೆ ದೊರೆಯದ ಕಾರಣ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಭೂಸ್ವಾಧೀನ ಸುಗ್ರೀವಾಜ್ಞೆಯ ಅವಧಿಯು ಇದೇ ಜೂನ್ 4ಕ್ಕೆ ಮುಕ್ತಾಯವಾಗಲಿದ್ದು, ಏಪ್ರಿಲ್ 23ರಂದು ರಾಜ್ಯಸಭಾ ಅಧಿವೇಶನ ಸಮಾವೇಶಗೊಂಡ ಆರು ವಾರಗಳ ಬಳಿಕ ಸುಗ್ರೀವಾಜ್ಞೆಯ ಅವಧಿ ಮುಗಿಯಲಿದೆ. ಅಧಿವೇಶನದಲ್ಲಿ ಸುಗ್ರೀವಾಜ್ನೆಯ ಬದಲಿಗೆ ಕಾನೂನನ್ನು ಅಂಗೀಕರಿಸಬೇಕಾಗಿತ್ತು. ವಿಪಕ್ಷಗಳ ತೀವ್ರ ವಿರೋಧದಿಂದ ಅದು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ವಿಷಯವನ್ನು ಶನಿವಾರ ನಡೆದ ಕೇಂದ್ರ ಸಚಿವ ಸಂಪುಟದ ಕಾರ್ಯಸೂಚಿಯಲ್ಲಿ ಸೇರಿಸಲಾಗಿತ್ತು.