ಮಾಸ್ಕೋ : ಜಮ್ಮು-ಕಾಶ್ಮೀರದ ಉರಿ ಸೆಕ್ಟರ್ ನಲ್ಲಿರುವ ಸೇನಾ ಕಚೇರಿ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ಬೆನ್ನಲ್ಲೇ ರಷ್ಯಾ ಪಾಕಿಸ್ತಾನದೊಂದಿಗೆ ನಿಗದಿಯಾಗಿದ್ದ ಜಂಟಿ ಸೇನಾ ತಾಲೀಮನ್ನು ರದ್ದುಗೊಳಿಸಿದೆ.
ಈ ಮೂಲಕ ರಷ್ಯಾ ಭಾರತಕ್ಕೆ ರಾಜತಾಂತ್ರಿಕ ಬೆಂಬಲ ನೀಡಿರುವುದು ಸ್ಪಷ್ಟವಾಗಿದ್ದು, ಭಾರತದ ಗಡಿ ಪ್ರದೇಶದಲ್ಲಿ ಭಯೋತ್ಪಾದಕರ ಮೂಲಕ ಪರೋಕ್ಷ ಯುದ್ಧ ನಡೆಸುತ್ತಿರುವ ಪಾಕಿಸ್ತಾನಕ್ಕೆ ಭಾರಿ ಹಿನ್ನಡೆ ಉಂಟಾಗಿದೆ.
ಸೆ.24 ರಿಂದ ಅಕ್ಟೊಬರ್ 7 ವರೆಗೆ ರಷ್ಯಾ- ಪಾಕಿಸ್ತಾನ ಪಾಕಿಸ್ತಾನದ ಉತ್ತರ ಭಾಗದಲ್ಲಿರುವ ಪ್ರದೇಶವೊಂದರಲ್ಲಿ ಜಂಟಿ ಸೇನಾ ತಾಲೀಮು ನಡೆಸುವುದು ನಿಗದಿಯಾಗಿತ್ತು.
ಕೆಲವೇ ದಿನಗಳ ಹಿಂದೆ ಪಾಕಿಸ್ತಾನದೊಂದಿಗಿನ ಜಂಟಿ ತಾಲೀಮಿನ ಬಗ್ಗೆ ಸ್ಪಷ್ಟನೆ ನೀಡಿದ್ದ ರಷ್ಯಾ, ಭಾರತ ಇದರಿಂದ ಆತಂಕ ಪಡಬೇಕಿಲ್ಲ ಎಂದು ಹೇಳಿತ್ತು. ಆದರೆ ರಷ್ಯಾ ಸ್ಪಷ್ಟನೆ ನೀಡಿದ ಒಂದೆರಡು ದಿನಗಳಲ್ಲಿ ಪಾಕಿಸ್ತಾನ ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಭಾರತೀಯ ಸೇನೆಯ ಪ್ರಧಾನ ಕಚೇರಿ ಮೇಲೆ ಭಯೋತ್ಪಾದಕರ ಮೂಲಕ ದಾಳಿ ನಡೆಸಿ 18 ಯೋಧರ ಸಾವಿಗೆ ಕಾರಣವಾಗಿತ್ತು. ದಾಳಿ ನಡೆದ ಹಿನ್ನಲೆಯಲ್ಲಿ ರಷ್ಯಾ ಪಾಕ್ ನೊಂದಿಗೆ ನಡೆಯಬೇಕಿದ್ದ ಜಂಟಿ ಸೇನಾ ತಾಲೀಮನ್ನು ರದ್ದುಗೊಳಿಸಿದೆ.