ಬೆಂಗಳೂರು : ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಆಘಾತಕಾರಿ ಮಾಹಿತಿಗಳು ಲಭ್ಯವಾಗುತ್ತಿವೆ. ರವಿ.ಕೋಲಾರ ಡಿಸಿಯಾಗಿದ್ದಾಗ ಶಾಸಕ ವರ್ತೂರು ಪ್ರಕಾಶ್, ಕೆಳಹಂತದ ಅಧಿಕಾರಿಯೊಬ್ಬರಿಗೆ ಧಮ್ಕಿ ಹಾಕಿರುವ ಬಗ್ಗೆ ಜೆಡಿಎಲ್ ಪಿ ನಾಯಕ ಹೆಚ್.ಡಿ.ಕುಮಾರಸ್ವಾಮಿ ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ ಡಿ.ಕೆ.ರವಿ ಕೋಲಾರದಲ್ಲಿ ಜಿಲ್ಲಾಧಿಕಾರಿಯಾಗಿದ್ದ ಸಮಯದಲ್ಲಿ ಶಾಸಕ ವರ್ತೂರು ಪ್ರಕಾಶ್ ದೂರವಾಣಿ ಮೂಲಕ ಕರೆ ಮಾಡಿ ಅಧಿಕಾರಿಯೊಬ್ಬರಿಗೆ ಬೆದರಿಕೆ ಹಾಕಿರುವ ಸಂಭಾಷಣೆಯುಳ್ಳ ಆಡಿಯೋ ಟೇಪ್ ಬಿಡುಗಡೆ ಮಾಡಿದರು.
ಆಡಿಯೋ ಟೇಪ್ ನಲ್ಲಿರುವ ಸಂಭಾಷಣೆ ವಿವರ - ಜಪ್ತಿ ಮಾಡಿರುವ ಮರಳು ಲಾರಿಗಳನ್ನು ನೀನೇ ಹೋಗಿ ಬಿಡಿಸಿಕೊಂಡು ಬರಬೇಕು. ಅವರಾರೂ ತಪ್ಪು ಮಾಡಿಲ್ಲ, ಕೊಲೆಗಾರರೂ ಅಲ್ಲ ಎಂದು ಶಾಸಕರು ಹೇಳಿದಾಗ ಅಧಿಕಾರಿ, ನಮ್ಮ ಡಿಸಿ ಅವರ ಒತ್ತಡವಿದೆ. ಹಾಗೆಲ್ಲ ಮರಳು ಲಾರಿ ಬಿಡಿಸಿಕೊಂಡು ಬರಲಾಗದು ಎಂದು ಹೇಳುತ್ತಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಶಾಸಕರು 2 ನಿಮಿಷ ಕರಕ್ಟಾಗಿ ಕೋಳಿಸಿಕೋ. ನಾಳೆ ಅಥವಾ ನಾಡಿದ್ದು ಕ್ಯಾಬಿನೇಟ್ ಮೀಟಿಂಗ್, 13 ನೇ ತಾರಿಖು ಹೊಸ ಡಿಸಿ ಇಲ್ಲಿ ಇರ್ತಾನೆ. ಮರ್ಯಾದೆಯಿಂದ ಜಪ್ತಿ ಮಾಡಿರುವ 4 ಮರಳು ಲಾರಿಗಳನ್ನು ನೀನೇ ಹೋಗಿ ಬಿಡುಗಡೆ ಮಾಡಿಸಿಕೊಂಡು ಬರಬೇಕು ಎಂದು ಬೆದರಿಕೆ ಹಾಕಿದ್ದಾರೆ.
ಯಾವ ಡಿಸಿ ಅವನು ಆ ಡಿಸಿ ನಿನ್ನ ಸಸ್ಪೆಂಡ್ ಮಾಡಲಾಗದು. ಯಾಕಂದ್ರೆ. ಆತನೆ ಇನ್ನು ಎರಡುದಿನ ಮಾತ್ರ ಇರುವುದು. ಬಳಿಕ ಹೊಸ ಡಿಸಿ ಬರುತ್ತಾನೆ. ನಿನ್ನ ಹೆಸರು ಪ್ರಮೋಷನ್ ಲಿಸ್ಟ್ ನಲ್ಲಿದೆ. ನೀನು ನಮ್ಮ ಪರವಾಗಿ ಕೆಲಸ ಮಾಡಿದರೆ ನಿನಗೆ ಪ್ರಮೋಷನ್ ಕೊಡ್ಸ್ತೀನಿ. ನಿಮ್ಮ ಡಿಸಿ ಬಗ್ಗೆ ತಲೆಕೆಡಿಸಿಕೊಳ್ಳಬೇಡ ಹೇಳಿದಷ್ಟು ಮಾಡು ಎಂದು ಬೆದರಿಕೆ ಹಾಕಿದ್ದಾರೆ.
ಒಟ್ಟಿನಲ್ಲಿ ಡಿ.ಕೆ.ರವಿ ವರ್ಗಾವಣೆಗೂ ಮುನ್ನವೇ ಅಂದರೆ ಕ್ಯಾಬಿನೇಟ್ ಸಭೆಯಲ್ಲಿ ನಿರ್ಧಾರ ಹೊರಬೀಳುವ ಮೊದಲೇ ಶಾಸಕ ವರ್ತೂರು ಪ್ರಕಾಶ್ ಅವರಿಗೆ ಮಾಹಿತಿ ಇತ್ತು. ಅಷ್ಟೇ ಅಲ್ಲ ಡಿ.ಕೆ.ರವಿ ಅವರ ವರ್ಗಾವಣೆಯಲ್ಲಿ ರಾಜಕೀಯ ನಾಯಕರ ಕೈವಾಡ ಸ್ಪಷ್ಟವಾಗಿದೆ ಎಂಬುದಕ್ಕೆ ಇದು ಪುಷ್ಠಿದೊರೆತಂತಾಗಿದೆ.