Untitled Document
Sign Up | Login    
Dynamic website and Portals
  
March 23, 2015

ಡಿ.ಕೆ.ರವಿ ಸಾವಿನ ಪ್ರಕರಣ: ಸಿಐಡಿ ಮಧ್ಯಂತರ ವರದಿಗೆ ಹೈಕೋರ್ಟ್‌ ತಡೆ

ಬೆಂಗಳೂರು : ಐಎಎಸ್‌ ಅಧಿಕಾರಿ ಹಾಗೂ ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತರಾಗಿದ್ದ ಡಿ.ಕೆ.ರವಿ ಅನುಮಾನಾಸ್ಪದ ಸಾವು ಪ್ರಕರಣದ ಸಿಐಡಿ ತನಿಖೆಯ ಮಧ್ಯಂತರ ವರದಿಯನ್ನು ಬಹಿರಂಗಪಡಿಸದಂತೆ ಸರ್ಕಾರಕ್ಕೆ ಹೈಕೋರ್ಟ್‌ ನಿರ್ಬಂಧ ವಿಧಿಸಿದೆ. ತನ್ಮೂಲಕ ಸಿಐಡಿ ವರದಿಯನ್ನು ಸೋಮವಾರ ವಿಧಾನ ಮಂಡಲದಲ್ಲಿ ಮಂಡಿಸಲು ಮುಂದಾಗಿರುವ ಸರ್ಕಾರದ ಕ್ರಮಕ್ಕೆ ತಡೆ ನೀಡಿದಂತಾಗಿದೆ.

ಡಿ.ಕೆ.ರವಿ ಅವರ ಅಸಹಜ ಸಾವಿನ ತನಿಖೆಗೆ ಸಂಬಂಧಿಸಿದಂತೆ ಮಧ್ಯಂತರ ವರದಿ ಬಹಿರಂಗಪಡಿಸುವುದು ಮತ್ತು ಯಾವುದೇ ಸಾರ್ವಜನಿಕ ಹೇಳಿಕೆ ನೀಡದಂತೆ ರಾಜ್ಯ ಸರ್ಕಾರಕ್ಕೆ ನಿರ್ಬಂಧ ಹೇರಿ ಹೈಕೋರ್ಟ್‌ ಭಾನುವಾರ ಮಧ್ಯಂತರ ಆದೇಶ ಹೊರಡಿಸಿದೆ.

ಆದರೆ ತನಿಖೆ ಮುಂದುವರಿಸಲು ನಿಶಾನೆ ತೋರಿದೆ. ಐಎಎಸ್‌ ಅಧಿಕಾರಿ ಡಿ.ಕೆ. ರವಿ ಅವರು ಡಿ.16ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. ಆದರೆ, ಸಿಬಿಐ ತನಿಖೆಗೆ ವಹಿಸುವಂತೆ ವಿರೋಧ ಪಕ್ಷಗಳು, ಸಾರ್ವಜನಿಕರು ಹಾಗೂ ಹಲವು ಸಂಘ-ಸಂಸ್ಥೆಗಳಿಂದ ತೀವ್ರ ಒತ್ತಡ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೋಮವಾರ ಸದನದಲ್ಲಿ ತನಿಖೆಗೆ ಸಂಬಂಧಿಸಿದ ಮಧ್ಯಂತರ ವರದಿ ಮಂಡಿಸುವುದಾಗಿ ಘೋಷಣೆ ಮಾಡಿತ್ತು.

ರಾಜ್ಯ ಸರ್ಕಾರದ ಈ ಕ್ರಮಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿ ಸಾಯುವ ಮುನ್ನ ಡಿ.ಕೆ.ರವಿ ಅವರು ಮೊಬೈಲ್‌ ಸಂದೇಶ ಕಳುಹಿಸಿದ್ದ ಮಹಿಳಾ ಐಎಎಸ್‌ ಅಧಿಕಾರಿಯ ಪತಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ನ್ಯಾಯಾಲಯಕ್ಕೆ ರಜೆಯಿತ್ತು. ಆದರೆ, ಇದು ತುರ್ತು ಪ್ರಕರಣವಾಗಿರುವುದರಿಂದ ಅರ್ಜಿಯನ್ನು ತಕ್ಷಣ ವಿಚಾರಣೆ ನಡೆಸಲು ಅವಕಾಶ ಕೋರಿ ಅರ್ಜಿದಾರರು ಮುಖ್ಯ ನ್ಯಾಯಮೂರ್ತಿ ಡಿ.ಎಚ್‌. ವಘೇಲಾ ಅವರಲ್ಲಿ ಮನವಿ ಮಾಡಿದ್ದರು. ಈ ಮನವಿ ಪುರಸ್ಕರಿಸಿದ ಮುಖ್ಯ ನ್ಯಾಯಮೂರ್ತಿಗಳು ಅರ್ಜಿ ವಿಚಾರಣೆ ನಡೆಸಲು ನ್ಯಾ.ಎಸ್‌.ಅಬ್ದುಲ್‌ ನಜೀರ್‌ ಅವರಿಗೆ ಸೂಚಿಸಿದ್ದರು.

ಅದರಂತೆ ನ್ಯಾ.ಅಬ್ದುಲ್‌ ನಜೀರ್‌ ಅವರು ಅರ್ಜಿ ವಿಚಾರಣೆ ನಡೆಸಿ, 'ತಕರಾರು ಅರ್ಜಿ ಇತ್ಯರ್ಥವಾಗುವವರೆಗೂ ರಾಜ್ಯ ಸರ್ಕಾರ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರು ಮತ್ತು ಅಪರಾಧ ತನಿಖಾ ದಳ(ಸಿಐಡಿ) ಡಿ.ಕೆ.ರವಿ ಅವರ ಸಾವಿನ ಕುರಿತು ಪ್ರಗತಿಯಲ್ಲಿರುವ ತನಿಖೆಗೆ ಸಂಬಂಧಿಸಿದಂತೆ ಮಧ್ಯಂತರ ವರದಿ ಪ್ರಕಟಣೆ ಮಾಡಬಾರದು ಹಾಗೂ ಯಾವುದೇ ಸಾರ್ವಜನಿಕ ಹೇಳಿಕೆ ನೀಡಬಾರದು' ಎಂದು ಆದೇಶಿಸಿದರು.

ಆದರೆ, ಸಿಐಡಿ ನಡೆಸುತ್ತಿರುವ ತನಿಖೆಗೆ ಯಾವುದೇ ಅಡ್ಡಿ ಇಲ್ಲ. ತನಿಖೆ ಮುಂದುವರಿಸಬಹುದು ಎಂದು ಇದೇ ವೇಳೆ ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದರು. ಅಲ್ಲದೆ, ರಾಜ್ಯ ಸರ್ಕಾರ ಹಾಗೂ ಇತರೆ ಪ್ರತಿವಾದಿಗಳಿಗೆ ತುರ್ತು ನೋಟಿಸ್‌ ಜಾರಿ ಮಾಡಿರುವ ನ್ಯಾಯಮೂರ್ತಿಗಳು ವಿಚಾರಣೆಯನ್ನು ಸೋಮವಾರ ಮಧ್ಯಾಹ್ನ 2.30ಕ್ಕೆ ಮುಂದೂಡಿದ್ದಾರೆ.

ಸುಪ್ರೀಂ ಆದೇಶದ ಉಲ್ಲಂಘನೆ: ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಸಜ್ಜನ್‌ ಪೂವಯ್ಯ ವಾದಿಸಿ, 'ಡಿ.ಕೆ. ರವಿ ಅವರ ಅಸಹಜ ಸಾವಿನ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿದ್ದು, ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಹಂತದಲ್ಲಿ ರಾಜ್ಯ ಸರ್ಕಾರ ಸೋಮವಾರ ತನಿಖೆಗೆ ಸಂಬಂಧಿಸಿದ ಮಧ್ಯಂತರ ವರದಿಯನ್ನು ಸದನದಲ್ಲಿ ಮಂಡಿಸುವುದಾಗಿ ಘೋಷಿಸಿದೆ' ಎಂದು ಕೋರ್ಟ್‌ ಗಮನಕ್ಕೆ ತಂದರು.

ಯಾವುದೇ ಒಂದು ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಪೂರ್ಣಗೊಳ್ಳುವವರೆಗೂ ಆ ತನಿಖೆಗೆ ಸಂಬಂಧಿಸಿದ ಮಧ್ಯಂತರ ವರದಿ ಪ್ರಕಟಣೆ ಮಾಡುವಂತಿಲ್ಲ ಅಥವಾ ಸಾರ್ವಜನಿಕ ಹೇಳಿಕೆ ನೀಡುವಂತಿಲ್ಲ. ಈ ರೀತಿ ತನಿಖೆ ಕುರಿತು ಮಧ್ಯಂತರ ವರದಿ ಮಂಡಿಸುವುದು ಕಾನೂನುಬಾಹಿರ.

ಇದರಿಂದ ತನಿಖೆ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಅಲ್ಲದೆ, ತನಿಖೆ ಸಂದರ್ಭದಲ್ಲಿ ಕೆಲ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಗಿರುತ್ತದೆ.

ವಿಚಾರಣೆಗೆ ಒಳಪಟ್ಟ ವ್ಯಕ್ತಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ತನಿಖಾಧಿಕಾರಿಗಳು ಸಂಗ್ರಹಿಸಿರುತ್ತಾರೆ. ಒಂದು ವೇಳೆ ತನಿಖೆಯ ಮಧ್ಯಂತರ ವರದಿ ಮಂಡಿಸುವುದರಿಂದ ವ್ಯಕ್ತಿಗಳ ವೈಯಕ್ತಿಕ ಹಕ್ಕು ಹರಣವಾಗುವುದಲ್ಲದೆ, ಅವರ ಖಾಸಗಿ ವಿಷಯಗಳು ಬಹಿರಂಗವಾಗುತ್ತವೆ ಎಂದು ಪ್ರತಿಪಾದಿಸಿದರು.

ಅಲ್ಲದೆ, ಯಾವುದೇ ವ್ಯಕ್ತಿಯ ವೈಯಕ್ತಿಕ ಹಕ್ಕಿಗೆ ಹಾಗೂ ಖಾಸಗಿತನಕ್ಕೆ ಧಕ್ಕೆ ತರಲು ಯಾವ ಪ್ರಾಧಿಕಾರಕ್ಕೂ ಅಧಿಕಾರವಿಲ್ಲ. ಮೇಲಾಗಿ ತನಿಖೆ ಪೂರ್ಣಗೊಳ್ಳುವವರೆಗೂ ಅಥವಾ ಪ್ರಗತಿಯಲ್ಲಿರುವ ಹಂತದಲ್ಲಿ ತನಿಖೆಗೆ ಸಂಬಂಧಿಸಿದ ಮಧ್ಯಂತರ ವರದಿ ಪ್ರಕಟಣೆ ಮಾಡುವಂತಿಲ್ಲ ಅಥವಾ ಸಾರ್ವಜನಿಕ ಹೇಳಿಕೆ ನೀಡುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಹಲವು ಪ್ರಕರಣಗಳಲ್ಲಿ ಆದೇಶಿಸಿದೆ. ಅದರಂತೆ ಡಿ.ಕೆ.ರವಿ ಸಾವಿನ ಪ್ರಕರಣದಲ್ಲಿ ಮಧ್ಯಂತರ ವರದಿ ಮಂಡಿಸಲು ಮುಂದಾಗಿರುವ ರಾಜ್ಯ ಸರ್ಕಾರದ ನಡೆ ಸುಪ್ರೀಂಕೋರ್ಟ್‌ ಆದೇಶ ಉಲ್ಲಂಘನೆ ಮಾಡುವಂತಹದ್ದಾಗಿದೆ. ಸರ್ಕಾರದ ನಡೆಗೆ ತಡೆ ನೀಡಬೇಕು ಎಂದು ಕೋರಿದರು. ಈ ಕೋರಿಕೆಯನ್ನು ನ್ಯಾಯಮೂರ್ತಿಗಳು ಪುರಸ್ಕರಿಸಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited