ಬೆಂಗಳೂರು : ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ನಿಗೂಢ ಸಾವಿನ ತನಿಖೆ ನಡೆಸುತ್ತಿರುವ ಸಿಬಿಐ ಬುಧವಾರ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಕೆ ಎಚ್ ಮುನಿಯಪ್ಪ ಮತ್ತು ಕೋಲಾರ ಶಾಸಕ ವರ್ತೂರು ಪ್ರಕಾಶ್ ರನ್ನು ಪ್ರಶ್ನಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಡಿ.ಕೆ.ರವಿ ಕೋಲಾರದ ಕಮಿಷನರ್ ಆಗಿದ್ದ ಸಂದರ್ಭದಲ್ಲಿ ಕೆ.ಎಚ್ ಮುನಿಯಪ್ಪ ಡಿ.ಕೆ ರವಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದುದ್ದರಿಂದ ಸಿಬಿಐ ಅವರನ್ನು ತನಿಖೆಗೆ ಒಳಪಡಿಸಿದೆ ಎಂದು ಹೇಳಲಾಗಿದೆ.
ಕೋಲಾರದಲ್ಲಿ ಮರಳು ಮಾಫಿಯಾ ಮತ್ತು ಸರ್ಕಾರಿ ಜಾಗ ಒತ್ತುವರಿ ವಿರುದ್ದ ಧ್ವನಿ ಎತ್ತಿದ್ದ ಡಿ ಕೆ ರವಿ ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದರು. ಅವರ ಈ ಕಾರ್ಯಶೈಲಿಯನ್ನು ಇಷ್ಟಪಡದ ಕೆ ಎಚ್ ಮುನಿಯಪ್ಪ ಮತ್ತು ಕೋಲಾರ ಶಾಸಕ ವರ್ತೂರು ಪ್ರಕಾಶ್ ಬಹಳ ಸಂದರ್ಭದಲ್ಲಿ ಡಿ ಕೆ ರವಿಯೊಂದಿಗೆ ವಾಗ್ವಾದ ನಡೆಸಿದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮಾತುಕತೆಗಳು ಕೇಳಿ ಬರುತ್ತಿವೆ.
ಈ ವಿಷಯಕ್ಕೆ ಸ್ಪಷ್ಟಣೆ ನೀಡಿದ ಸಿಬಿಐ ಅಧಿಕಾರಿಗಳು, ತನಿಖೆಗೆ ಒಳಪಡಿಸಿದ ವ್ಯಕ್ತಿಗಳೆಲ್ಲಾ ಈ ಪ್ರಕರಣದಲ್ಲಿ ಭಾಗಿ ಎಂದು ಹೇಳಲಾಗುವುದಿಲ್ಲ, ಈಗಾಗಲೇ ದೆಹಲಿಯ ಅಖಿಲ ಭಾರತೀಯ ವೈದ್ಯ ವಿಜ್ನಾನ ಸಂಸ್ಥೆ (ಎಮ್ಸ್) ವೈದ್ಯರು ಇದೊಂದು ಆತ್ಮಹತ್ಯೆ ಎಂದು ವರದಿ ನೀಡಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಕೆಲವೇ ವಾರಗಳಲ್ಲಿ ಸಿಬಿಐ ಈ ತನಿಖೆಯನ್ನು ಮುಗಿಸಲಿದೆ.