ಬೆಂಗಳೂರು : ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ನಿಗೂಢ ಸಾವಿನ ಹಿನ್ನೆಲೆಯಲ್ಲಿ ದಟ್ಟೈಸುತ್ತಿರುವ ಜನಾಕ್ರೋಶ ರಾಷ್ಟ್ರಮಟ್ಟ ತಲುಪಿರುವ ಹಿನ್ನೆಲೆಯಲ್ಲಿ ತುಸು ಮೆತ್ತಗಾದಂತಿರುವ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸುವ ದಿಸೆಯಲ್ಲಿ ಗಂಭೀರ ಚಿಂತನೆ ಆರಂಭಿಸಿದೆ.
ಡಿ.ಕೆ ರವಿ ಅವರ ನಿಗೂಢ ಸಾವಿನ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಪ್ರಕರಣವನ್ನು ಸಿಬಿಐಗೆ ವಹಿಸುವ ಬಗ್ಗೆ ಸೋಮವಾರ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಏನನ್ನೂ ಮುಚ್ಚಿಟ್ಟಿಲ್ಲ, ಸರ್ಕಾರ ಯಾವುದೇ ವರದಿಯನ್ನೂ ತಿರುಚಿಲ್ಲ, ಯಾರನ್ನೂ ರಕ್ಷಿಸುವ ಉದ್ದೇಶ ರಾಜ್ಯ ಸರ್ಕಾರಕ್ಕಿಲ್ಲ ಎಂದರು.
ಸಿಬಿಐ ತನಿಖೆ ಬಗ್ಗೆ ಸೋಮವಾರ ವಿಧಾನಸಭೆಯಲ್ಲಿ ಪ್ರಕಟಿಸಲಾಗುವುದು. ಹೆಚ್.ಡಿ.ಕುಮಾರಸ್ವಾಮಿ ಬಾಲಿಶ ಹೇಳಿಕೆ ನೀಡುತ್ತಿದ್ದು, ವಿಪಕ್ಷಗಳು ರಾಜಕೀಯ ಮಾಡುವುದರಲ್ಲೇ ಕಾಲಕಳೆಯುತ್ತಿವೆ. ತನಿಖಾ ಸಂಸ್ಥೆಗಳ ಪಾರದರ್ಶಕತೆ ಬಗ್ಗೆ ಮಾತನಾಡಿಲ್ಲ. ಯಾರನ್ನೂ ರಕ್ಷಿಸುವ ಉದ್ದೇಶ ನಮ್ಮ ಸರ್ಕಾರಕ್ಕಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.