ನವದೆಹಲಿ : ಮಹಿಳೆಯರ ಬಗ್ಗೆ ಅಸಭ್ಯ ರೀತಿಯಲ್ಲಿ ಮಾತನಾಡಿದರೂ ತಮ್ಮ ಮೊಂಡು ವಾದವನ್ನೇ ಮುಂದುವರೆಸಿರುವ ಜೆಡಿಯು ನಾಯಕ ಶರದ್ ಯಾದವ್ ಅವರನ್ನು ಕೇಂದ್ರ ಮಾನವ ಮತ್ತು ಸಂಪನ್ಮೂಲ ಇಲಾಖೆ ಸಚಿವೆ ಸ್ಮೃತಿ ಇರಾನಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಹಿರಿಯ ರಾಜಕಾರಣಿಯಾಗಿರುವ ಶರದ್ ಯಾದವ್ ಅವರು ಮಹಿಳೆಯರ ಬಗ್ಗೆ ಅಸಭ್ಯ ರೀತಿಯಲ್ಲಿ ಹೇಳಿಕೆ ನೀಡುವುದನ್ನು ನಿಲ್ಲಿಸಿ ಕ್ಷಮೆಯಾಚಿಸಬೇಕು. ಮಹಿಳೆಯರ ಬಗ್ಗೆ ಅವರು ನೀಡುತ್ತಿರುವ ಹೇಳಿಕೆಯಿಂದಾಗಿ ತಪ್ಪು ಸಂದೇಶ ರವಾನೆಯಾಗುತ್ತಿದೆ ಎಂದು ಸ್ಮೃತಿ ಇರಾನಿ ರಾಜ್ಯಸಭೆ ಕಲಾಪದಲ್ಲಿ ಒತ್ತಾಯಿಸಿದ್ದಾರೆ.
ಆದರೆ ಸ್ಮೃತಿ ಇರಾನಿ ಅವರ ಮನವಿಗೂ ಆಕ್ಷೇಪಾರ್ಹ ರೀತಿಯಲ್ಲೇ ಹೇಳಿಕೆ ನೀಡಿರುವ ಶರದ್ ಯಾದವ್ ನೀವು ಎಂತಹ ಮಹಿಳೆ ಎಂದು ನನಗೆ ಗೊತ್ತು ಎಂದು ಹೇಳುವ ಮೂಲಕ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಭಾರತೀಯ ಮಹಿಳೆಯರ ಮೈಬಣ್ಣದ ಬಗ್ಗೆ ನೀಡಿರುವ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವುದೂ ಸಾಲದೆಂಬಂತೆ ತಮ್ಮ ಹೇಳಿಕೆ ಬಗ್ಗೆ ಚರ್ಚೆಗೆ ಸಿದ್ಧ ಎಂದು ಶರದ್ ಯಾದವ್ ತಿಳಿಸಿದ್ದಾರೆ.
ಇದೇ ವೇಳೆ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿ ಅಖಿಲ ಭಾರತ ಪ್ರಜಾಪ್ರಭುತ್ವ ಮಹಿಳಾ ಸಂಘಟನೆ ಜೆಡಿಯು ಮುಖ್ಯಸ್ಥ ಶರದ್ ಯಾದವ್ ಅವರ ವಿರುದ್ಧ ಪ್ರತಿಭಟನೆ ನಡೆಸಲು ಸಜ್ಜಾಗಿದೆ.
ಶರದ್ ಯಾದವ್ ವಿವಾದಾತ್ಮಕ ಹೇಳಿಕೆಗೆ ಪಕ್ಷಾತೀತವಾಗಿ ವಿರೋಧ ವ್ಯಕ್ತವಾಗುತ್ತಿದ್ದರೂ, ಕ್ಷಮೆ ಕೇಳುವ ಬದಲು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವುದರಲ್ಲೇ ಶರದ್ ಯಾದವ್ ನಿರತರಾಗಿದ್ದಾರೆ.