ಲಂಡನ್ : ಬ್ರಿಟನ್ ಸಂಸತ್ ಚೌಕದಲ್ಲಿ ನಿರ್ಮಾಣಗೊಂಡಿರುವ ಮಹಾತ್ಮ ಗಾಂಧಿ ಅವರ ಕಂಚಿತ ಪುತ್ಥಳಿಯನ್ನು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮಾರ್ಚ್ 14ರಂದು ಅನಾವರಣಗೊಳಿಸಿದರು.
ಲಂಡನ್ನಿನ ಪಾರ್ಲಿಮೆಂಟ್ ಸ್ಕೈರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಲಾಯಿತು.ಒಂದು ಮಿಲಿಯನ್ಸ್ ಪೌಂಡ್ಸ್ ದೇಣಿಗೆಯಲ್ಲಿ ನಿರ್ಮಾಣ ವಾದ ಪ್ರತಿಮೆ ಇದಾಗಿದ್ದು, ಸಾರ್ವಜನಿಕರಿಗೆ ಮುಕ್ತ ಪ್ರವೇಶ ನೀಡಲಾಗಿತ್ತು. ಬಾಲಿವುಡ್ ಬಿಗ್ ಅಮಿತಾಭ್ ಬಚ್ಚನ್, ಗಾಂಧೀಜಿ ಅವರ ಮೊಮ್ಮಗ, ಗೋಪಾಲಕೃಷ್ಣ ಗಾಂಧಿ ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಅರುಣ್ ಜೇಟ್ಲಿ, ಗಾಂಧೀಜಿ ದಕ್ಷಿಣ ಆಫ್ಹ್ರಿಕಾದಿಂದ ಭಾರತಕ್ಕೆ ಮರಳಿದ 100 ನೇ ವರ್ಷಾಚರಣೆಯ ನೆನಪಿಗಾಗಿ ನಿರ್ಮಿಸಲಾಗಿರುವ 9 ಅಡಿ ಎತ್ತರದ ಈ ಪ್ರತಿಮೆ ಅನಾವರಣ ಸಂದರ್ಭ ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯ ವೃದ್ಧಿಯ ಐತಿಹಾಸಿಕ ಕ್ಷಣವಾಗಿದೆ ಎಂದರು.
ಇದಕ್ಕೂ ಮೊದಲು ಲಂಡನ್ ನಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಸರಾಸರಿ ಶೇ 7.5ರಷ್ಟು ಜಿಡಿಪಿ ಪ್ರಗತಿ ನಿರೀಕ್ಷಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಮುಂದಿನ ಹಣಕಾಸು ವರ್ಷದಲ್ಲೂ ಗರಿಷ್ಠ ಜಿಡಿಪಿ ಪ್ರಗತಿ ನಿರೀಕ್ಷಿಸಲಾಗಿದೆ. ಕೇಂದ್ರದಲ್ಲಿ ಹೊಸ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಆರ್ಥಿಕ ಪುನಶ್ಚೇತನ ತ್ವರಿತಗತಿಯಲ್ಲಿ ನಡೆಯುತ್ತಿದೆ ಎಂದರು.
ಕಳೆದ ಐದು ವರ್ಷ ಭಾರತದ ಆರ್ಥಿಕ ಬೆಳವಣಿಗೆ ದರ ನಕಾರಾತ್ಮಕವಾಗಿತ್ತು. ಹಿಂದಿನ ಸರ್ಕಾರದ ನೀತಿಗಳು ಪಾರ್ಶ್ವವಾಯು ಪೀಡಿತವಾಗಿದ್ದವು. ಆದರೆ, ಅಂತಿಮವಾಗಿ ಜನರು ಬದಲಾವಣೆ ಬಯಸಿ, ಹೊಸ ಸರ್ಕಾರವನ್ನು ಆಯ್ಕೆ ಮಾಡುವ ಮೂಲಕ ಅಭಿವೃದ್ಧಿಗೆ ಅವಕಾಶ ಕಲ್ಪಿಸಿದ್ದಾರೆ ಎಂದು ಅವರು ಪರೋಕ್ಷವಾಗಿ ಯುಪಿಎ ಸರ್ಕಾರವನ್ನು ಟೀಕಿಸಿದರು.
ಈ ಮೊದಲು ಭಾರತ ‘ಬ್ರಿಕ್’ ದೇಶಗಳ ಆರ್ಥಿಕ ಪ್ರಗತಿ ಪಟ್ಟಿಯಲ್ಲಿ ಅತ್ಯಂತ ಕೆಳಮಟ್ಟದಲ್ಲಿತ್ತು. ಆದರೆ, ಈಗ ಪ್ರಪಂಚದಲ್ಲೇ ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರಮುಖ ಆರ್ಥಿಕ ಶಕ್ತಿಯಾಗಿ ಭಾರತ ಬೆಳೆಯುತ್ತಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಸರಾಸರಿ ಶೇ 7.5ರಷ್ಟು ‘ಜಿಡಿಪಿ’ ಪ್ರಗತಿ ನಿರೀಕ್ಷಿಸಲಾಗಿದೆ ಎಂದು ಹೇಳಿದರು.