ನವದೆಹಲಿ : 'ಕಲ್ಲಿದ್ದಲು ಹಗರಣ'ಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ನಿವಾಸದಿಂದ ಮನಮೋಹನ್ ಸಿಂಗ್ ನಿವಾಸದ ವರೆಗೆ ಏಕತಾ ಮೆರವಣಿಗೆ ಕೈಗೊಳ್ಳಲಾಗಿದೆ.
ಮನಮೋಹನ್ ಸಿಂಗ್ ನೆರವಿಗೆ ಧಾವಿಸಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮಾ.12ರಂದು ಕಾಂಗ್ರೆಸ್ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿ ಮೋತಿಲಾಲ್ ನೆಹರೂ ಮಾರ್ಗ್ ನಲ್ಲಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿವಾಸದ ವರೆಗೂ ಮೆರವಣಿಗೆ ಕೈಗೊಂಡಿದ್ದಾರೆ.
ಏಕತಾ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಇಡೀ ವಿಶ್ವವೇ ಗುರುತಿಸುವ ನಾಯಕರಾಗಿದ್ದಾರೆ. ಅಲ್ಲದೇ ಅವರು ಸಮಗ್ರತೆಯ ವ್ಯಕ್ತಿ, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮನಮೋಹನ್ ಸಿಂಗ್ ಅವರಿಗೆ ಬೆಂಬಲ ನೀಡುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಿಬಿಐ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಮನ್ಸ್ ನೀಡುವುದು ನಮ್ಮನ್ನು ಕೆರಳಿಸಿದೆ. ಸಮನ್ಸ್ ಸಂಬಂಧ ಕಾನೂನು ತಜ್ನರೊಂದಿಗೆ ಚರ್ಚೆ ನಡೆಸಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪರವಾಗಿ ಕಾಂಗ್ರೆಸ್ ಕಾನೂನು ಹೋರಾಟ ನಡೆಸಲಿದೆ ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ. ಏಕತಾ ಮೆರವಣಿಗೆಯಲ್ಲಿ ರಾಜ್ಯಸಭೆ, ಲೋಕಸಭೆಯ ಕಾಂಗ್ರೆಸ್ ಸದಸ್ಯರು ಭಾಗವಹಿಸಿದ್ದಾರೆ.