ಹೈದ್ರಾಬಾದ್ : ಬಹುಕೋಟಿ ಸತ್ಯಂ ಕಂಪ್ಯೂಟರ್ಸ್ ಹಗರಣದಲ್ಲಿ ರಾಮಲಿಂಗಾರಾಜು ಸೇರಿದಂತೆ ಹತ್ತು ಮಂದಿ ಆರೋಪಿಗಳು ದೋಷಿ ಎಂದು ಹೈದರಾಬಾದ್ ನ ಸಿಬಿಐ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಹತ್ತು ಜನರ ಶಿಕ್ಷೆಯ ಪ್ರಮಾಣವನ್ನು ಕೋರ್ಟ್ ಇಂದೇ ಪ್ರಕಟಿಸಿದೆ.
ಸಿಬಿಐ ವಿಶೇಷ ನ್ಯಾಯಾಧೀಶ ಬಿ.ವಿ.ಎಲ್.ಎನ್ ಚಕ್ರವರ್ತಿ, ಪ್ರಕರಣದ ಎಲ್ಲಾ 10 ಆರೋಪಿಗಳು ತಪ್ಪಿತಸ್ಥರು ಎಂದು ತೀರ್ಪು ಪ್ರಕಟಿಸಿದರು. ಅಲ್ಲದೇ ಪ್ರಕರಣದ ಪ್ರಮುಖ ಆರೋಪಿ ಸತ್ಯಂ ಸಂಸ್ಥಾಪಕ ರಾಮಲಿಂಗಾರಾಜುಗೆ 7 ವರ್ಷ ಜೈಲುಶಿಕ್ಷೆ, 5.5 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ಉಳಿದ 9 ಆರೋಪಿಗಳಿಗೂ 7 ವರ್ಷ ಜೈಲುಶಿಕ್ಷೆ, 25 ಲಕ್ಷ ರೂ. ದಂಡ ವಿಧಿಸಿದೆ. ರಾಮಲಿಂಗಾ ರಾಜು ಈಗಾಗಲೇ 32 ತಿಂಗಳು ಕಾಲ ಜೈಲುಶಿಕ್ಷೆ ಅನುಭವಿಸಿದ್ದಾರೆ.
ರಾಮಲಿಂಗಾರಾಜು, ಅವರ ಸಹೋದರ ಬಿ.ರಾಮ ರಾಜು, ವಡ್ಲಮನಿ ಶ್ರೀನಿವಾಸ್, ಅಡಿಟರ್ ಸುಬ್ರಮಣಿ ಗೋಪಾಲ್ ಕೃಷ್ಣನ್ ಹಾಗೂ ಟಿ. ಶ್ರೀನಿವಾಸ್, ರಾಜು ಅವರ ಮತ್ತೊಬ್ಬ ಸಹೋದರ ಬಿ.ಸೂರ್ಯನಾರಾಯಣ ರಾಜು, ಮಾಜಿ ಉದ್ಯೋಗಿಗಳಾದ ಜಿ.ರಾಮಕೃಷ್ಣ, ಡಿ.ವೆಂಕಟಪತಿ ರಾಜು ಹಾಗೂ ಶ್ರೀಸೈಲಂ ಮತ್ತು ವಿ.ಎಸ್ ಪ್ರಭಾಕರ್ ಗುಪ್ತಾ ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ಕೋರ್ಟ್ ತೀರ್ಪು ನೀಡಿದೆ.
ಬಹುಕೋಟಿ ಹಗರಣದ ಕುರಿತ ಪ್ರಕರಣದ ಬಗ್ಗೆ ಮಾರ್ಚ್ 9ರಂದು ನಡೆದ ಕೊನೆಯ ವಿಚಾರಣೆಯಲ್ಲಿ ವಿಶೇಷ ನ್ಯಾಯಾಧೀಶ ಬಿ.ವಿ.ಎಲ್.ಎನ್ ಚಕ್ರವರ್ತಿ, ಏಪ್ರಿಲ್ 9ರಂದು ತೀರ್ಪನ್ನು ಪ್ರಕಟಿಸಲಾಗುವುದು. ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ, ಏಪ್ರಿಲ್ 9 ತೀರ್ಪು ನೀಡಲು ಅಂತಿಮ ದಿನಾಂಕ. ಮತ್ತೆ ಮುಂದೂಡುವ ಪ್ರಶ್ನೆಯೇ ಇಲ್ಲ. ಕೋರ್ಟ್ ಇನ್ನು ಕಾಯುವ ಸ್ಥಿತಿಯಲ್ಲಿ ಇಲ್ಲ ಎಂದು ಹೇಳಿದ್ದರು.