ನವದೆಹಲಿ : ದೇಶದ್ರೋಹಿ ಪ್ರತ್ಯೇಕತಾವಾದಿ ನಾಯಕ ಮಸರತ್ ಆಲಂ ಬಿಡುಗಡೆ ಬಗ್ಗೆ ಸಂಸತ್ತು ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಮೆತ್ತಗಾಗಿದ್ದಾರೆ. ಬಿಜೆಪಿ ಜತೆ ಸಮಾಲೋಚನೆ ನಡೆಸದೆ ಇನ್ನು ಮುಂದೆ ಯಾವೊಬ್ಬ ಪ್ರತ್ಯೇಕತಾವಾದಿಯನ್ನೂ ಬಂಧಮುಕ್ತಗೊಳಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಅಲ್ಲದೇ ಜಮ್ಮು-ಕಾಶ್ಮೀರದ ಗೃಹ ಇಲಾಖೆಯ ಕಾರ್ಯದರ್ಶಿ ಸುರೇಶ್ ಕುಮಾರ್ ಕೂಡಾ ಹೊಸದಾಗಿ ಯಾವುದೇ ಪ್ರತ್ಯೇಕತಾವಾದಿಗಳು ಅಥವಾ ಉಗ್ರರನ್ನು ಬಿಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಈ ಕುರಿತು ಎದ್ದಿದ್ದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಮಸರತ್ ಬಿಡುಗಡೆ ಕುರಿತು ಸಂಸತ್ತಿನ ಒಳಗೂ, ಹೊರಗೂ ಭಾರೀ ಗದ್ದಲ ಎದ್ದಿರುವ ಬೆನ್ನಲ್ಲೇ ಕೆಲವೊಂದು ಸ್ಪಷ್ಟನೆ ಬಯಸಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಮುಫ್ತಿ ಮೊಹಮ್ಮದ್ ಸಯೀದ್ ಗೆ ದೂರವಾಣಿ ಕರೆ ಮಾಡಿದ್ದರು. ಈ ಚರ್ಚೆ ವೇಳೆ ಬಿಜೆಪಿ ಜತೆ ಚರ್ಚಿಸದೆ ಪ್ರತ್ಯೇಕತಾವಾದಿಗಳನ್ನು ಬಿಡುಗಡೆ ಮಾಡುವುದಿಲ್ಲ ಎಂಬ ಆಶ್ವಾಸನೆಯನ್ನು ಮುಖ್ಯಮಂತ್ರಿ ನೀಡಿದರು ಎಂದು ಮೂಲಗಳು ತಿಳಿಸಿವೆ.
ಕಳೆದ 22 ವರ್ಷಗಳಿಂದ ಜೈಲಿನಲ್ಲಿರುವ ಆಶಿಕ್ ಹುಸೇನ್ ಫಕ್ರೂ ಸೇರಿದಂತೆ 15 ಪ್ರತ್ಯೇಕತಾವಾದಿಗಳನ್ನು ಬಿಡುಗಡೆ ಮಾಡಲು ಜಮ್ಮು-ಕಾಶ್ಮೀರ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಮುಫ್ತಿ ನೀಡಿರುವ ಈ ಭರವಸೆಯಿಂದ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಿಟ್ಟುಸಿರು ಬಿಡುವಂತಾಗಿದೆ.