ಶ್ರೀನಗರ : ಇತ್ತೀಚೆಗಷ್ಟೇ ಪಾಕಿಸ್ತಾನ ಹಾಗೂ ಉಗ್ರರನ್ನು ಹೊಗಳಿ ವಿವಾದಕ್ಕೀಡಾಗಿದ್ದ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್, ಪಾಕ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶಾಂತಿ ಮತ್ತು ಸಾಮರಸ್ಯ ಬೇಕಾಗಿದ್ದರೆ ಪಾಕಿಸ್ತಾನ ಭಯೋತ್ಪಾದನೆಗೆ ಕಡಿವಾಣ ಹಾಕಬೇಕೆಂದು ತಿಳಿಸಿದ್ದಾರೆ.
ಜಮ್ಮುವಿನ ಕಾಥುವಾ ಮತ್ತು ಸಾಂಬಾದಲ್ಲಿ ಉಗ್ರರು ನಡೆಸಿರುವ ಗುಂಡಿನ ದಾಳಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಶಾಂತಿ ಪ್ರಕ್ರಿಯೆ ಕದಡುವ ಸಂಚಾಗಿದೆ ಎಂದು ಗುಡುಗಿದ್ದಾರೆ.
ಕಾಥುವಾ ಮತ್ತು ಸಾಂಬಾ ಮಿಲಿಟರಿ ಕ್ಯಾಂಪ್ ಮೇಲೆ ಉಗ್ರರು ದಾಳಿ ನಡೆಸಿದ ಘಟನೆ ನಂತರ ಅಸೆಂಬ್ಲಿಯಲ್ಲಿ ಮಾತನಾಡಿದ ಅವರು, ಇಂತಹ ಭಯೋತ್ಪಾದನೆ ದಾಳಿಯಿಂದ ಜಮ್ಮು-ಕಾಶ್ಮೀರದ ಜನತೆಯ ಧೈರ್ಯಗುಂದಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಭಯೋತ್ಪಾದನೆ ವಿರುದ್ಧ ಹೋರಾಡುವ ಕಠಿಣ ಇಚ್ಚೆ ನಮ್ಮದಾಗಿದೆ. ನಿಮಗೆ (ಪಾಕಿಸ್ತಾನ) ಶಾಂತಿ ಬೇಕಾಗಿದ್ದರೆ, ನೀವು ಭಯೋತ್ಪಾದನೆಯನ್ನು ಮಟ್ಟಹಾಕಿ ಎಂದರು. ಈ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ವಿರೋಧ ಪಕ್ಷಗಳು ಕೋಲಾಹಲ ನಡೆಸಿದ್ದರಿಂದ ಪ್ರಶ್ನೋತ್ತರ ಅವಧಿಯನ್ನು ಮುಂದೂಡಲಾಯಿತು.
ಭಯೋತ್ಪಾದಕರು ಏನು ಆಲೋಚಿಸುತ್ತಿದ್ದಾರೆಂದು ನನಗೆ ಗೊತ್ತಿಲ್ಲ. ಆದರೆ ಅವರು ಮುಗ್ದ ಜನರ ಹತ್ಯೆಗೈಯುತ್ತಿದ್ದಾರೆ. ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಜಮ್ಮುವಿನ ರಘುನಾಥ ದೇವಾಲಯದ ಮೇಲೆ ದಾಳಿ ನಡೆಸಿದ್ದರು. ಹಾಗಾಗಿ ನಾನು ಎಲ್ಲಾ ಪಕ್ಷದ ಶಾಸಕರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ಕಾಥುವಾ ಮತ್ತು ಸಾಂಬಾ ದಾಳಿಯನ್ನು ಸರ್ವಾನುಮತದಿಂದ ಖಂಡಿಸಿ ನಿರ್ಣಯ ಪಾಸ್ ಮಾಡಬೇಕೆಂದು ಹೇಳಿದರು.