ನವದೆಹಲಿ : ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರೀಗ ಹೊಸ ವಿವಾದವೊಂದನ್ನು ಹುಟ್ಟು ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ಗೆ ಹೋಲಿಸಿದ್ದಾರೆ, ಕಾಶ್ಮೀರೀ ಪ್ರತ್ಯೇಕತಾವಾದಿ ನಾಯಕ ಮಸರತ್ ಆಲಂನನ್ನು 'ಸಾಹಬ್' ಎಂದು ಗೌರವಪೂರ್ವಕವಾಗಿ ಕರೆದಿದ್ದಾರೆ.
ಕಾಶ್ಮೀರೀ ಪ್ರತ್ಯೇಕತಾವಾದಿ ಆಲಂನನ್ನು ಯಾವ ಕಾನೂನಿನ ಯಾವ ಸೆಕ್ಷನ್ ಪ್ರಕಾರ ಜಮ್ಮು - ಕಾಶ್ಮೀರ ಸರಕಾರ ಬಂಧಿಸಿದೆ ಎಂಬುದನ್ನು ಸರಕಾರವೇ ನಮಗೆ ತಿಳಿಸಬೇಕು ಎಂದು ಒತ್ತಾಯಿಸಿರುವ ದಿಗ್ವಿಜಯ್ ಸಿಂಗ್, ಸರಕಾರದಲ್ಲಿರುವವರು ನಮಗೆ ಹೇಳಿರುವಂತೆ ಆಲಂ ಭಾರತದ ವಿರುದ್ಧ ಯುದ್ಧಕ್ಕೆ ಸಮನಾದ ಕೃತ್ಯವನ್ನು ಎಸಗಿದ್ದಾನೆ; ಅಂತೆಯೇ ಆತನ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದಯನ್ನು ಅನ್ವಯಿಸಬೇಕಾಗುತ್ತದೆ ಎಂದು ನಾವು ತಿಳಿಯಬೇಕಾಗುತ್ತದೆ ಎಂದು ಹೇಳಿದ್ದಾರೆ.
ಜಮ್ಮು ಕಾಶ್ಮೀರದ ಫುಲ್ವಾಮಾ ಜಿಲ್ಲೆಯ ತ್ರಾಲ್ ಪ್ರದೇಶದಲ್ಲಿ ಹುರಿಯತ್ ಕಾನ್ಫರೆನ್ಸ್ ಸಮಾವೇಶ ನಡೆಯುವುದಕ್ಕೆ ಮುಂಚಿತವಾಗಿ ಭದ್ರತಾ ಪಡೆಗಳ ಗುಂಡಿಗೆ ಯುವಕನೋರ್ವ ಬಲಿಯಾಗಿದ್ದ. ಇದನ್ನು ಅನುಸರಿಸಿ ಶುಕ್ರವಾರ ಬೆಳಗ್ಗೆ ಆಲಂನನ್ನು ಶ್ರೀನಗರದಲ್ಲಿ ಬಂಧಿಸಲಾಗಿತ್ತು.
ಮೋದಿ ತನ್ನ ವಿದೇಶ ಪ್ರವಾಸದ ಸಂದರ್ಭದಲ್ಲಿ ಕೆನಡದಲ್ಲಿ ಮಾಡಿದ ಭಾಷಣದಲ್ಲಿ ವಿರೋಧ ಪಕ್ಷ ಕಾಂಗ್ರೆಸ್ ಬಗ್ಗೆ ಟೀಕೆ ಮಾಡಿದ್ದನ್ನು ಖಂಡಿಸಿದ ದಿಗ್ವಿಜಯ್ ಸಿಂಗ್, 'ದೇಶದ ಆಂತರಿಕ ರಾಜಕಾರಣದ ಬಗ್ಗೆ ವಿದೇಶದಲ್ಲಿ ಮಾತನಾಡುವುದು ಪ್ರಧಾನಿಗೆ ಹೇಳಿಸಿದ್ದಲ್ಲ. ಅದು ಅವರ ವಿಭಜಕ ಮನೋಭಾವವನ್ನು ತೋರಿಸುತ್ತದೆ' ಎಂದು ಟೀಕಿಸಿದರು. ಕಾಂಗ್ರೆಸ್ ಸರಕಾರ ಗುಡ್ಡೆ ಹಾಕಿದ್ದ ಕೊಳೆಯನ್ನು ತೊಳೆದು ಶುದ್ಧೀಕರಿಸದೇ ತನ್ನ ಸರಕಾರ ವಿರಮಿಸುವುದಿಲ್ಲ ಎಂದು ಮೋದಿ ಕೆನಡದಲ್ಲಿನ ತಮ್ಮ ಭಾಷಣದಲ್ಲಿ ಹೇಳಿದ್ದರು.
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಟೈಮ್ ನಿಯತಕಾಲಿಕದಲ್ಲಿ ಮೋದಿಯನ್ನು ಹೊಗಳಿ ಬರೆದ ಲೇಖನವನ್ನು ಉಲ್ಲೇಖೀಸಿದ ದಿಗ್ವಿಜಯ್ ಸಿಂಗ್, "ಹಿಂದೊಮ್ಮೆ ಬ್ರಿಟಿಷ್ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಕೂಡ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ನನ್ನು ಹೊಗಳಿದ್ದರು. ಆದರೆ ಆ ಬಳಿಕ ಅವರು (ಚರ್ಚಿಲ್) ತನ್ನ ಮಾತುಗಳನ್ನು ಹಿಂದಕ್ಕೆ ಪಡೆದರು' ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ 56 ದಿನಗಳ ಸುದೀರ್ಘ ಅಜ್ಞಾತವಾಸದ ರಜೆ ಮುಗಿಸಿ ಮರಳಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ದಿಗ್ವಿಜಯ್ ಸಿಂಗ್, " ಮೊದಲು ನೀವು ದಯವಿಟ್ಟು ಗುಜರಾತ್ನ ಗಾಂಧೀನಗರಕ್ಕೆ ಹೋಗಿ, ಅಲ್ಲಿನ ಮತದಾರರು ತಮ್ಮ ಪ್ರತಿನಿಧಿ ಲಾಲ್ ಕೃಷ್ಣ ಆಡ್ವಾಣಿಯ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ಕೇಳಿಸಿಕೊಂಡು ಬನ್ನಿ' ಎಂದು ಮಾರ್ಮಿಕವಾಗಿ ನುಡಿದರು.