ಶ್ರೀನಗರ : ಪಾಕಿಸ್ತಾನದ ಉದ್ಧಟತನಕ್ಕೆ ಭಾರತ ತಕ್ಕ ಉತ್ತರ ನೀಡಿದೆ. ಉಭಯ ದೇಶಗಳ ರಾಷ್ಟ್ರೀಯ ರಕ್ಷಣಾ ಸಲಹೆಗಾರರ (ಎನ್.ಎಸ್.ಎ.) ಮಾತುಕತೆಗೆ ಮೊದಲು ಕಾಶ್ಮೀರಿ ಪ್ರತ್ಯೇಕತಾವಾದಿಗಳನ್ನು ಪಾಕ್ ಎನ್.ಎಸ್.ಎ. ಸರ್ತಾಜ್ ಅಝಿಝ್ ಜೊತೆಗೆ ಮಾತುಕತೆಗೆ ಅಹ್ವಾನಿಸಿರುವ ಹಿನ್ನಲೆಯಲ್ಲಿ ಕ್ಷಿಪ್ರವಾಗಿ ಪ್ರತಿಕ್ರಿಯಿಸಿದ ಸರಕಾರ ಪ್ರತ್ಯೇಕತಾವಾದಿಗಳನ್ನು ಗೃಹಬಂಧನದಲ್ಲಿ ಇರಿಸಿದೆ.
ಭಾರತದಲ್ಲಿದ್ದುಕೊಂಡು ದೇಶದ್ರೋಹ ಕಾರ್ಯ ಮಾಡುತ್ತಿರುವ ಪ್ರಮುಖ ಪ್ರತ್ಯೇಕತಾವಾದಿಗಳಾದ ಹುರಿಯತ್ ಕಾನ್ಫೆರೆನ್ಸ್ ನಾಯಕ ಸಯ್ಯದ್ ಅಲಿ ಶಾ, ಮಿರ್ವೈಝ್ ಉಮರ್ ಫಾರೂಕ್, ಅಬ್ಬಾಸ್ ಅನ್ಸಾರಿ, ಜಮ್ಮು ಕಾಶ್ಮೀರ ಲಿಬರೇಷನ್ ಫ್ರಂಟ್ ಅಧ್ಯಕ್ಷ ಮುಹಮ್ಮದ್ ಯಾಸಿನ್ ಮಲಿಕ್ ಅವರನ್ನು ಗುರುವಾರ ಮುಂಜಾನೆ ಶ್ರೀನಗರದಲ್ಲಿ
ಗೃಹಬಂಧನದಲ್ಲಿರಿಸಲಾಗಿದೆ. ಅವರ ಮನೆಗಳಿಗೆ ರಕ್ಷಣಾ ತಡೆಗಳನ್ನು (ಬ್ಯಾರಿಕೇಡ್) ಹಾಕಲಾಗಿದೆ.
ಪ್ರತ್ಯೇಕತಾವಾದಿಗಳನ್ನು ಮಾತುಕತೆಗೆ ಅಹ್ವಾನಿಸಿರುವ ಪಾಕಿಸ್ತಾನದ ನಡೆ ಭಾರತವನ್ನು ಛೇಡಿಸುವುದಾಗಿದೆ. ಹಾಗಿದ್ದರೂ ಎನ್.ಎಸ್.ಎ. ಮಾತುಕತೆಯನ್ನು ರದ್ದುಗೊಳಿಸುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.
ಎನ್.ಎಸ್.ಎ. ಸ್ಥರದ ಮಾತುಕತೆಯನ್ನು ವಿಫಲಗೊಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವ ಪಾಕ್ ಸೇನೆ ಹಾಗೂ ಐ.ಎಸ್.ಐ. ಪ್ರತ್ಯೇಕತಾವಾದಿಗಳನ್ನು ಮಾತುಕತೆಗೆ ಅಹ್ವಾನಿಸಿ ಭಾರತಕ್ಕೆ ಕಿರಿಕಿರಿ ಉಂಟುಮಾಡುವ ಉದ್ದೇಶ ಹೊಂದಿದೆ. ಕಳೆದ ವರ್ಷ ಜುಲೈ ಯಲ್ಲಿ ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆಗೂ ಮುನ್ನ ಇಡೆ ರೀತಿ ಕಾಶ್ಮೀರಿ ಪ್ರತ್ಯೇಕತಾವಾದಿಗಳನ್ನು ಮಾತುಕತೆಗೆ ಅಹ್ವಾನಿಸಿದ ಪಾಕ್ ಕ್ರಮವನ್ನು ವಿರೋಧಿಸಿ ಭಾರತ ಮಾತುಕತೆಯನ್ನೇ ರದ್ದುಗೊಳಿಸಿತ್ತು. ಈ ಸಲವೂ ಇದೇ ತಂತ್ರವನ್ನು ಅನುಸರಿಸಲು ಹೊರಟಿರುವ ಪಾಕಿಸ್ತಾನಕ್ಕೆ ಭಾರತ ಬೇರೆಯದೇ ರೀತಿಯಲ್ಲಿ ಉತ್ತರಿಸಿದೆ.
ಮಾತುಕತೆಗೆ ವಿಘ್ನ ತರುವ ಪಾಕ್ ಸೇನೆಯ ಪ್ರಯತ್ನ ಮುಂದುವರಿದಿದ್ದು, ಗಡಿ ಭಾಗದಲ್ಲೂ ನಿರಂತರವಾಗಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ. ಆದರೂ ಸಹ ಪಾಕ್ ಎನ್.ಎಸ್.ಎ. ಸರ್ತಾಜ್ ಅಝಿಝಿ ಜೊತೆ ಮಾತುಕತೆಯನ್ನು ರದ್ದುಗೊಳಿಸುವುದಿಲ್ಲವೆಂದು ಭಾರತ ಹೇಳಿದ್ದು, 'ಮಾತುಕತೆ ವೇಳೆ ಪಾಕಿಸ್ತಾನಕ್ಕೆ ಆಶ್ಚರ್ಯವೊಂದು ಕಾದಿದೆ' ಎಂದು ಮೂಲಗಳು ಹೇಳಿದ್ದು ಹೆಚ್ಚಿನ ವಿವರ ನೀಡಲು ನಿರಾಕರಿಸಿವೆ.
ಮುಂದಿನ ಭಾನುವಾರ, ಆ.೨೩ರಂದು ಭಾರತದ ರಕ್ಷಣಾ ಸಲಹೆಗಾರ ಅಜಿತ್ ದೋವಲ್ ಅವರು ಪಾಕಿಸ್ತಾನದ ಎನ್.ಎಸ್.ಎ. ಸರ್ತಾಜ್ ಅಝಿಝಿ ಅವರ ಜೊತೆಗೆ ಮಾತುಕತೆ ನಡೆಸಲಿದ್ದಾರೆ. ಮಾತುಕತೆಯ ಬಹುಭಾಗ ಭಯೋತ್ಪಾದನೆ ಮತ್ತು ಅದನ್ನು ತಡೆಗಟ್ಟುವ ಬಗ್ಗೆ ಮೀಸಲಾಗಿದೆ.