ಇಸ್ಲಾಮಾಬಾದ್ : ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿ ಉಭಯ ರಾಷ್ಟ್ರಗಳ ನಡುವೆ ಶಾಂತಿ ಮಾತುಕತೆ ಪುನಾರಂಭಿಸಲು ಮಹತ್ವದ ಹೆಜ್ಜೆ ಇಟ್ಟ ಬೆನ್ನಲ್ಲೇ ಪಾಕಿಸ್ತಾನ ಮತ್ತೂಮ್ಮೆ ತನ್ನ ಹಳೆ ಚಾಳಿ ಪ್ರದರ್ಶಿಸಿದೆ.
7 ತಿಂಗಳ ಹಿಂದೆ ಕಾಶ್ಮೀರ ಪ್ರತ್ಯೇಕತಾವಾದಿಗಳನ್ನು ಭೇಟಿ ಮಾಡಿ ಉಭಯ ರಾಷ್ಟ್ರಗಳ ಕಾರ್ಯದರ್ಶಿ ಮಟ್ಟದ ಮಾತುಕತೆ ರದ್ದಾಗಲು ಕಾರಣವಾಗಿದ್ದ ಪಾಕಿಸ್ತಾನ ರಾಯಭಾರಿ ಅಬ್ದುಲ್ ಬಾಸಿತ್ ಅವರು ಇದೀಗ ಹುರಿಯತ್ ನಾಯಕ ಸೈಯದ್ ಆಲಿ ಗಿಲಾನಿಯನ್ನು ಭೇಟಿ ಮಾಡುವ ಮೂಲಕ ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನವದೆಹಲಿಯಲ್ಲಿ ಹುರಿಯತ್ ನಾಯಕ ಗಿಲಾನಿ ನಿವಾಸಕ್ಕೆ ಅಬ್ದುಲ್ ಬಾಸಿತ್ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಭಾರತ ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ಪಾಕ್ ಪ್ರವಾಸ ಹಾಗೂ ಜಮ್ಮು-ಕಾಶ್ಮೀರದ ಬೆಳವಣಿಗೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ.
ಮಾ.23 ರಂದು ನಡೆಯಲಿರುವ ಪಾಕಿಸ್ತಾನ ಸಂಸ್ಥಾಪನಾ ದಿನಕ್ಕೆ ಗಿಲಾನಿಗೆ ಆಹ್ವಾನ ನೀಡಿದ್ದಾರೆ. ಈ ಭೇಟಿಯ ಬಳಿಕ ಮಾತನಾಡಿರುವ ಹುರಿಯತ್ ನಾಯಕ ಗಿಲಾನಿ, ಕಾಶ್ಮೀರ ವಿಷಯವೇ ಪ್ರಮುಖವಾಗಿದ್ದು, ಇದು ಬಗೆಹರಿದರೆ ಉಳಿದೆಲ್ಲ ಸಮಸ್ಯೆಗಳು ಪರಿಹಾರ ಆಗಲಿವೆ ಎಂದು ತಿಳಿಸಿದ್ದಾನೆ.
ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಮಸರತ್ ಅಲಂನನ್ನು ಜೈಲಿನಿಂದ ಪಿಡಿಪಿ ಮುಖ್ಯಸ್ಥ, ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರು ಬಿಡುಗಡೆ ಮಾಡಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲಿಕಿಸಿರುವ ಬೆನ್ನಲ್ಲೇ ಪಾಕ್ ರಾಯಭಾರಿಯು ಹುರಿಯತ್ ನಾಯಕ ಗಿಲಾನಿಯನ್ನು ಭೇಟಿ ಮಾಡಿರುವುದು ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಮತ್ತಷ್ಟು ಸಂಕಷ್ಟಕ್ಕೆ ಕಾರಣವಾಗಿದೆ.
ಇತ್ತ ಜೈಶಂಕರ್ ಅವರು ಉಭಯ ರಾಷ್ಟ್ರಗಳ ನಡುವೆ ಮಾತುಕತೆ ಅಣಿ ಮಾಡುತ್ತಿದ್ದರೆ, ಅತ್ತ ಪಾಕ್ ರಾಯಭಾರಿ ಅಬ್ದುಲ್ ಬಾಸಿತ್, ಪದೇ ಪದೇ ಕಾಶ್ಮೀರ ಪ್ರತ್ಯೇಕತಾವಾದಿಗಳನ್ನು ಭೇಟಿ ಮಾಡುವ ಮೂಲಕ ಭಾರತವನ್ನು ಕೆರಳಿಸುವಂತೆ ವರ್ತಿಸುತ್ತಿದ್ದಾರೆ.