ನವದೆಹಲಿ : ಹಾರ್ಟ್ ಆಫ್ ಏಷ್ಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಐಜಾಜ್ ಅಹಮ್ಮದ್ ಚೌಧರಿ, ನವದೆಹಲಿಯಲ್ಲಿ ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಇಜಾಜ್ ನೇತೃತ್ವದ ನಿಯೋಗ ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆಯಲ್ಲಿ ಪಾಲ್ಗೊಂಡಿದ್ದು, ಈ ಮೂಲಕ ಪಠಾಣ್ ಕೋಟ್ ವಾಯುನೆಲೆ ದಾಳಿಯ ನಂತರ ಸ್ಥಗಿತಗೊಂಡಿದ್ದ ಭಾರತ-ಪಾಕಿಸ್ತಾನ ಶಾಂತಿ ಮಾತುಕತೆ ಪ್ರಕ್ರಿಯೆಗೆ ಮರುಚಾಲನೆ ಸಿಕ್ಕಂತಾಗಿದೆ.
ಉಭಯ ದೇಶದ ದೇಶಗಳು ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಗಡಿ ವಿವಾದ, ಪಠಾಣ್ ಕೋಟ್ ವಾಯುನೆಲೆಯ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಇದೇ ವೇಳೆ ಉಭಯ ದೇಶಗಳು ಶಾಂತಿ ಕಾಪಾಡಿಕೊಂಡು, ಬಾಂಧವ್ಯ ವೃದ್ಧಿಸಿಕೊಳ್ಳುವ ಬಗ್ಗೆ ಒತ್ತು ನೀಡುವ ನಿಲುವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಅಲ್ಲದೆ ಉಗ್ರವಾದದ ವಿಚಾರದಲ್ಲಿ ದ್ವಿಪಕ್ಷೀಯ ಒಪ್ಪಂದಕ್ಕೆ ಧಕ್ಕೆ ಆಗದಂತೆ ಬದ್ಧತೆ ಕಾಯ್ದುಕೊಳ್ಳುವ ವಿಚಾರ, ಜಮ್ಮು-ಕಾಶ್ಮೀರ ಗಡಿ ವಿಚಾರ ಹಾಗೂ ಮೀನುಗಾರರ ವಿಚಾರವಾಗಿಯೂ ಚರ್ಚೆ ಭಾರತ ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ.