ಜಮ್ಮು-ಕಾಶ್ಮೀರ : ಪ್ರತ್ಯೇಕವಾದಿ ನಾಯಕ ಮಸ್ರತ್ ಆಲಂ ನ್ನು ಬಿಡುಗಡೆ ಮಾಡಿದ ಬಳಿಕ ಜಮ್ಮು-ಕಾಶ್ಮೀರ ಸರ್ಕಾರ, ಆಶೀಕ್ ಹುಸೇನ್ ಫಾಕ್ತೂ ಎಂಬ ಮತ್ತೊಬ್ಬ ಪ್ರತ್ಯೇಕವಾದಿ ನಾಯಕನನ್ನು ಬಿಡುಗಡೆ ಮಾಡಲು ತೀರ್ಮಾನಿಸಿದೆ ಎಂದು ಹೇಳಲಾಗಿದೆ.
ಮಸ್ರತ್ ಆಲಂ ಬಿಡುಗಡೆ ವಿಷಯ ಸಂಸತ್ ಕಲಾಪದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ. ಏನತ್ಮಧ್ಯೆ ಜಮ್ಮು-ಕಾಶ್ಮೀರ ಸರ್ಕಾರ ಮತ್ತೊಬ್ಬ ಪ್ರತ್ಯೇಕವಾದಿ ನಾಯಕನನ್ನು ಬಿಡುಗಡೆ ಮಾಡಲು ಹೊರಟಿರುವುದು ಮತ್ತಷ್ಟು ವಿವಾದಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ. ಅಲ್ಲದೇ ಇದರಿಂದ ಬಿಜೆಪಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ.
ಪ್ರತ್ಯೇಕವಾದಿ ಮುಖಂಡ ಫಾಕ್ತೂ ಕಳೆದ 22 ವರ್ಷಗಳಿಂದ ಜೈಲಿನಲ್ಲಿದ್ದು, ಕಣಿವೆಯಲ್ಲಿ ಅಂತ್ಯಂತ ಹೆಚ್ಚು ವರ್ಷ ಜೈಲಿನಲ್ಲಿದ್ದ ಪ್ರತ್ಯೇಕವಾದಿ ಎಂಬ ಖ್ಯಾತಿಯೂ ಆತನಿಗಿದೆ. ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡುವುದಕ್ಕೆ ಸಂಬಂಧಿಸಿದಂತೆ ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರ ರಚನೆ ಸಂದರ್ಭದ್ಲಲಿ ನಡೆಸಲಾಗಿದ್ದ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ ಚರ್ಚೆ ನಡೆಸಲಾಗಿತ್ತು. ಆದರೆ ಈ ಬಗ್ಗೆ ಯಾವುದೇ ಒಪ್ಪಂದ ನಡೆದಿರಲಿಲ್ಲ ಎಂದು ಬಿಜೆಪಿ ನಾಯಕರೊಬ್ಬರು ಎಕೆನಾಮಿಕ್ ಟೈಮ್ಸ್ ಗೆ ಸ್ಪಷ್ಟನೆ ನೀಡಿದ್ದಾರೆ.
ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮದ್ ಸಯೀದ್ ಅವರು ಕಣಿವೆ ಭಾಗದಲ್ಲಿ ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳುವುದಕ್ಕಾಗಿಯೇ ಪ್ರತ್ಯೇಕವಾದಿ ಮುಖಂಡರನ್ನು ಬಿಡುಗಡೆ ಮಾಡುವ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.