ಜಮ್ಮು-ಕಾಶ್ಮೀರ : 'ಕಾಶ್ಮೀರ'ದಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ್ದ ಪ್ರತ್ಯೇಕತಾವಾದಿ ನಾಯಕ ಮಸ್ರತ್ ಆಲಂ ನನ್ನು ಪೊಲೀಸರು ಬಂಧಿಸಿದ್ದಾರೆ.
ಏ.16ರಂದು ರಾತ್ರಿ ಶ್ರೀನಗರದ ಜೈಂದಾರ್ ಏರಿಯಾದಲ್ಲಿ ಮಸರತ್ ಆಲಂ ಹಾಗೂ ಸಯೀದ್ ಅಲಿ ಗಿಲಾನಿ ಅವರನ್ನು ಗೃಹ ಬಂಧನದಲ್ಲಿರಿಸಲಾಗಿತ್ತು. ಏ.17ರಂದು ಬೆಳಿಗ್ಗೆ ಮಸರತ್ ಆಲಂ ನನ್ನು ವಶಕ್ಕೆ ಪಡೆದು ಬಂಧಿಸಲಾಗಿದೆ.
ಗಿಲಾನಿ ಹಾಗೂ ಮಸರತ್ ಆಲಂ ಇಬ್ಬರೂ ಪ್ರತ್ಯೇಕತಾವಾದಿ ನಾಯಕರು ಏ.17ರಂದು ದಕ್ಷಿಣ ಕಾಶ್ಮೀರದಲ್ಲಿರುವ ಟ್ರಾಲ್ ನಗರಕ್ಕೆ ಭೇಟಿ ನೀಡಲು ಯೋಜನೆ ರೂಪಿಸಿದ್ದರು ಎಂದು ತಿಳಿದುಬಂದಿದೆ. ಭದ್ರತಾ ಪಡೆಗಳ ಗುಂಡಿನ ದಾಳಿಗೆ ಸಿಲುಕಿ ಓರ್ವ ನಾಗರಿಕ ಮೃತಪಟ್ಟ ಹಿನ್ನೆಲೆಯಲ್ಲಿ ಇಬ್ಬರೂ ಪ್ರತ್ಯೇಕತಾವಾದಿಗಳು ಆ ಭಾಗಕ್ಕೆ ಭೇಟಿ ನೀಡುವವರಿದ್ದರು. ಆದರೆ ಬಂಧನಕ್ಕೊಳಗಾಗಿರುವುದರಿಂದ ಭೇಟಿ ರದ್ದಾಗಿದೆ.
ಏ.15ರಂದು ಕಾಶ್ಮೀರದ್ಲಲಿ ನಡೆದ ರ್ಯಾಲಿಯಲ್ಲಿ ಪ್ರತ್ಯೇಕತಾವಾದಿ ನಾಯಕ ಮಸರತ್ ಆಲಂ ಹಾಗೂ ಸಯೀದ್ ಅಲಿ ಗಿಲಾನಿ ಪಾಕ್ ಧ್ವಜವನ್ನು ಪ್ರದರ್ಶಿಸಿ, ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಹ ಪ್ರತ್ಯೇಕತಾವಾದಿಗಳನ್ನು ಬಂಧಿಸಲು ಆದೇಶಿಸುವಂತೆ ಜಮ್ಮು-ಕಾಶ್ಮೀರ ಸಿ.ಎಂ ಮುಫ್ತಿ ಮೊಹಮದ್ ಸಯೀದ್ ಗೆ ಸೂಚನೆ ನೀಡಿದ್ದರು.