ಶ್ರೀನಗರ : ಕಾಶ್ಮೀರದಲ್ಲಿ ಮತ್ತೊಮ್ಮೆ ಪಾಕಿಸ್ತಾನದ ಧ್ವಜ ಹಾರಾಡಿದೆ. ಮೇ.1ರಂದು ಹುರಿಯತ್ ಕಾನ್ಫರೆನ್ಸ್ ನ ಮುಖಂಡ ಸಯೀದ್ ಅಲಿ ಶಾ ಗಿಲಾನಿ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ಪ್ರತ್ಯೇಕತಾವಾದಿಗಳು ಪಾಕ್ ಬಾವುಟ ಪ್ರದರ್ಶಿಸಿದ್ದಾರೆ.
ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಸಯೀದ್ ಅಲಿ ಶಾ ಗಿಲಾನಿ, ಕಾಶ್ಮೀರದಲ್ಲಿ ನಡೆಯುವ ಪ್ರಸಿದ್ಧ ಅಮರನಾಥ ಯಾತ್ರೆಯನ್ನು ಕೇವಲ ಒಂದು ತಿಂಗಳಿಗೆ ಮೊಟಕುಗೊಳಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾನೆ.
ಕಳೆದ ತಿಂಗಳೂ ಇದೇ ರೀತಿ ಉದ್ಧಟತನ ಪ್ರದರ್ಶಿಸಿದ್ದ ಪ್ರತ್ಯೇಕತಾವಾದಿಗಳು, ಪಾಕ್ ಧ್ವಜ ಹಾರಿಸಿ ಅಹಿತಕರ ವಾತಾವರಣ ನಿರ್ಮಾಣ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರತ್ಯೇಕತಾವಾದಿ ಮಸ್ರತ್ ಆಲಂ ನನ್ನು ಸಾರ್ವಜನಿಕ ಸುರಕ್ಷಾ ಕಾಯ್ದೆಯಡಿ ಬಂಧಿಸಲಾಗಿತ್ತು. ಕಾಶ್ಮೀರದಲ್ಲಿ ಪಾಕ್ ಪರ ಘೋಷಣೆ ಕೂಗುವುದು ಪಾಕಿಸ್ತಾನದ ಧ್ವಜ ಹಾರಿಸುವುದನ್ನು ಸಹಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿತ್ತು. ಆದಾಗ್ಯೂ ಕಾಶ್ಮೀರದಲ್ಲಿ ಪಾಕ್ ಧ್ವಜವನ್ನು ಹಾರಿಸಿರುವ ಪ್ರತ್ಯೇಕತಾವಾದಿಗಳು, ಹಿಂದೂಗಳ ಪವಿತ್ರ ಅಮರನಾಥ ಯಾತ್ರೆಯನ್ನು ಕೇವಲ ಒಂದು ತಿಂಗಳಿಗೆ ಮೊಟಕುಗೊಳಿಸಬೇಕೆಂದು ಬೇಡಿಕೆ ಇಟ್ಟಿದ್ದಾರೆ.