ನವದೆಹಲಿ : 'ಕಾಶ್ಮೀರಿ ಪಂಡಿತ'ರಿಗೆ ಪುನರ್ವಸತಿ ಕಲ್ಪಿಸುವ ಯೋಜನೆ ಬಗ್ಗೆ ಪಾಕಿಸ್ತಾನದ ನಿಲುವನ್ನು ಭಾರತ ಸರ್ಕಾರ ಖಂಡಿಸಿದೆ. ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸಿದರೆ, ಜನಸಂಖ್ಯೆಯಲ್ಲಿ ವ್ಯತ್ಯಯವಾಗುವುದರಿಂದ ವಿಶ್ವಸಂಸ್ಥೆ ನಿರ್ಣಯಗಳನ್ನು ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಪಾಕಿಸ್ತಾನ ಅಭಿಪ್ರಾಯಪಟ್ಟಿತ್ತು.
ಈ ಹಿನ್ನೆಲೆಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ, ಕಾಶ್ಮೀರಿ ಪಂಡಿತರು, ಮುಸ್ಲಿಮರು, ಸಿಖ್ ಸಮುದಾಯದವರು ಜಮ್ಮು-ಕಾಶ್ಮೀರ ಜನಸಂಖ್ಯೆಯ ಅವಿಭಾಜ್ಯ ಅಂಗ ಎಂದು ತಿಳಿಸಿದ್ದಾರೆ. ಪುನರ್ವಸತಿ ಕಲ್ಪಿಸುವ ಯೋಜನೆಯಿಂದ ಕಾಶ್ಮೀರಿ ಪಂಡಿತರು ಕಾಶ್ಮೀರಕ್ಕೆ ವಾಪಸ್ಸಾಗಬೇಕೆಂಬುದು ಭಾರತದ ಪ್ರತಿಯೊಂದು ಪಕ್ಷದ ಆಶಯವಾಗಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.
ಕಾಶ್ಮೀರದಿಂದ ಹೊರಗಿರುವವರನ್ನು ವಾಪಸ್ ಕರೆತರುವ ಮೂಲಕ ಭಾರತ ಸರ್ಕಾರ ಅಲ್ಲಿನ ಜನಸಂಖ್ಯೆಯನ್ನು ಬದಲು ಮಾಡುವಂತಿಲ್ಲ, ಪುನರ್ವಸತಿ ಕಲ್ಪಿಸಿದರೆ ವಿಶ್ವಸಂಸ್ಥೆ ನಿರ್ಣಯಕ್ಕೆ ಧಕ್ಕೆಯುಂಟಾಗಲಿದೆ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆ ವಕ್ತಾರ ತಸ್ನಿಮ್ ಅಸ್ಲಮ್ ಹೇಳಿಕೆ ನೀಡಿದ್ದರು.
ಜಮ್ಮು-ಕಾಶ್ಮೀರದಲ್ಲಿರುವ ಪಿಡಿಪಿ-ಬಿಜೆಪಿ ಸರ್ಕಾರ ಕಾಶ್ಮೀರಿ ಪಂಡಿತರ ಪುನರ್ವಸತಿಗಾಗಿ ಈಗಾಗಲೇ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದು ಶೀಘ್ರವೇ ಪುನರ್ವಸತಿ ಸೌಲಭ್ಯಗಳನ್ನು ಕಲ್ಪಿಸಲಿದೆ. ಈ ಯೋಜನೆಗೆ ಕಾಶ್ಮೀರಿ ಪ್ರತ್ಯೇಕತವಾದಿಗಳು ತಗಾದೆ ತೆಗೆದಿರುವ ಬೆನ್ನಲ್ಲೇ ಪಾಕಿಸ್ತಾನ ಸಹ ಉದ್ಧಟತನದಿಂದ ತನ್ನ ಸಲಹೆ ನೀಡಲು ಮುಂದಾಗಿದೆ.