Udupi : ಕೋಮು ಪ್ರಚೋದಕ ಭಾಷಣದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆದ ಹಿಂದೂ ಸಮಾಜೋತ್ಸವಕ್ಕೆ ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾಗೆ ನಿಷೇಧ ಹೇರಿದ ಬೆನ್ನಲ್ಲೇ ಉಡುಪಿ, ಚಿಕ್ಕಮಗಳೂರು ಹಾಗೂ ಹಾಸನಗಳಲ್ಲಿಯೂ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.
ಉಡುಪಿಯಲ್ಲಿ ಮಾ. 9ರಂದು, ಹಾಸನ ಹಾಗೂ ಚಿಕ್ಕಮಗಳೂರಲ್ಲಿ ಮಾ.10ರಂದು ಸಮಾಜೋತ್ಸವ ನಿಯೋಜಿಸಲಾಗುತ್ತಿದ್ದು, ಎರಡೂ ಕಡೆ ತೋಗಾಡಿಯಾ ಭಾಷಣ ನಿಗದಿಯಾಗಿತ್ತು.
ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಎಸ್ ಪಿ ಅಣ್ಣಾಮಲೈ ಕೆ, ವಿಶ್ವ ಹಿಂದೂ ಪರಿಷತ್ ಸ್ವರ್ಣ ಜಯಂತಿ ಪ್ರಯುಕ್ತ ಮಾ. 9ರಂದು ಉಡುಪಿಯಲ್ಲಿ ನಡೆಯುವ ವಿರಾಟ್ ಹಿಂದೂ ಸಮಾಜೋತ್ಸವದಲ್ಲಿ ತೊಗಾಡಿಯಾ ದಿಕ್ಸೂಚಿ ಭಾಷಣ ಮಾಡುವ ಕಾರ್ಯಕ್ರಮವಿತ್ತು. ಆದರೆ, ಮಾ.7ರಿಂದ 13ರ ವರೆಗೆ ಅವರಿಗೆ ಉಡುಪಿ ಜಿಲ್ಲೆ ಪ್ರವೇಶ ಮಾಡದಂತೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ ಎಂದು ತಿಳಿಸಿದರು.
ತೊಗಾಡಿಯಾ ಭಾಷಣಕ್ಕೆ ಅನುಮತಿ ನೀಡಬಾರದು ಹಾಗೂ 7 ದಿನ ಜಿಲ್ಲಾ ಪ್ರವೇಶ ನಿರ್ಬಂಧಿಸಬೇಕು ಎಂಬುದಾಗಿ ಜಿಲ್ಲಾಧಿಕಾರಿಗೆ ವರದಿ ನೀಡಿದ್ದೆ. ಬಳಿಕ, ಉಡುಪಿ ತಹಶೀಲ್ದಾರ್ ಅವರಿಂದಲೂ ವರದಿ ಪಡೆಯಲಾಗಿತ್ತು. ವರದಿ ಹಿನ್ನೆಲೆಯಲ್ಲಿ ಮಾ. 6ರಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು, ಮಾ.7ರಿಂದ 13ರ ವರೆಗೆ ಅವರಿಗೆ ಜಿಲ್ಲೆಗೆ ಪ್ರವೇಶ ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ಅವರು ಜಿಲ್ಲೆಯಲ್ಲಿ ಎಲ್ಲೂ ಸಭೆ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಿಲ್ಲ. ಅವರ ಆಡಿಯೋ, ವೀಡಿಯೋ ಭಾಷಣಕ್ಕೂ ಅವಕಾಶವಿಲ್ಲ. ಈ ಬಗ್ಗೆ ಕಾರ್ಯಕ್ರಮದ ಆಯೋಜಕರಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಉಲ್ಲಂ ಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಮಧ್ಯೆ, ಮಾ.10ರಂದು ಹಾಸನ ಹಾಗೂ ಚಿಕ್ಕಮಗಳೂರಿನಲ್ಲಿ ವಿರಾಟ್ ಹಿಂದೂ ಸಮಾಜೋತ್ಸವ ನಡೆಯುತ್ತಿದ್ದು, ಅಲ್ಲಿಯೂ ತೊಗಾಡಿಯಾ ಪ್ರವೇಶಕ್ಕೆ ನಿಷೇಧ ಹೇರಲಾಗುವುದು. ಆಡಿಯೋ, ವೀಡಿಯೋ ಭಾಷಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.