Udupi : ಉಡುಪಿಯಲ್ಲಿ ಇಂದು ವಿರಾಟ್ ಹಿಂದೂ ಸಮಾಜೋತ್ಸವದ ನಡೆಯಲಿದೆ. ಸಮಾಜೋತ್ಸವದಲ್ಲಿ ಪ್ರಮುಖ ಭಾಷಣಕಾರರಾಗಿ ಆಗಮಿಸಬೇಕಾಗಿದ್ದ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರ ಆಗಮನಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದೆ.
ಅಪರಾಹ್ನ 2ಗಂಟೆಗೆ ಜೋಡುಕಟ್ಟೆಯಿಂದ ಬೃಹತ್ ಶೋಭಾಯಾತ್ರೆ ಆರಂಭಗೊಂಡು ಎಂಜಿಎಂ ಕ್ರೀಡಾಂಗಣದಲ್ಲಿ ಸಮಾಪನಗೊಳ್ಳಲಿದೆ. 4 ಗಂಟೆಧಿಯಿಂದ 5.20ರ ವರೆಗೆ ಸಾರ್ವಜನಿಕ ಸಭೆ ನಡೆಯಲಿದ್ದು ಅಪಾರ ಜನಸ್ತೋಮವನ್ನು ನಿರೀಕ್ಷಿಸಲಾಗಿದೆ. ಕ್ರೀಡಾಂಗಣದಲ್ಲಿ ಅಳವಡಿಸಿದ 32 ಮಹಾಪುರುಷರ ತೈಲವರ್ಣ ಚಿತ್ರಗಳನ್ನು ವೀಕ್ಷಿಸಲು ಮೂರು ದಿನ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ.
ತೊಗಾಡಿಯಾ ನಿಷೇಧವನ್ನು ಪ್ರಶ್ನಿಸಿ ಸೋಮವಾರ ಉಚ್ಚ ನ್ಯಾಯಾಲಯದಲ್ಲಿ ವಿಹಿಂಪ ಪರವಾಗಿ ಪ್ರಕರಣ ದಾಖಲಿಸಲಿದ್ದು ಸೋಮವಾರವೇ ತೀರ್ಪು ಹೊರಬರುವ ಸಾಧ್ಯತೆಯಿದೆ.
ಕುಂದಾಪುರ, ಕಾಪು, ಕಾರ್ಕಳ ಮಾರ್ಗಗಳಿಂದ ಆಗಮಿಸುವವರಿಗೆ ವಿಹಿಂಪ ಈಗಾಗಲೇ ಸ್ಥಳ ನಿಗದಿಧಿಪಡಿಸಿ ಸೂಚಿಸಿದೆ. ಉಡುಪಿಯಿಂದ ಹೋಗುವ ಮತ್ತು ಬರುವ ನಿತ್ಯ ಪ್ರಯಾಣಿಕ ಬಸ್ಸುಗಳ ಮಾರ್ಗವನ್ನು ಸಂಚಾರಿ ಪೊಲೀಸರು ಅಪರಾಹ್ನ ಸ್ವಲ್ಪ ಮಟ್ಟಿಗೆ ಬದಲಾಯಿಸುವ ನಿರೀಕ್ಷೆ ಇದೆ.
ಶೋಭಾಯಾತ್ರೆ ಆರಂಭವಾಗುವ ಸ್ಥಳ ಜೋಡುಕಟ್ಟೆ ಬಳಿಯ ಆಲದ ಮರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆ ಹೊರಡಲಿದೆ. ವಿಶ್ವ ಹಿಂದೂ ಪರಿಷತ್ ನ ಲಾಂಛನ ಆಲದ ಮರವಾಗಿರುವುದು ಇದಕ್ಕೆ ಕಾರಣ. ವೈಜ್ಞಾನಿಕವಾಗಿ ಆಲದ ಮರ ಅತಿ ಹೆಚ್ಚು ಆಮ್ಲಜನಕ ಕೊಡುವ, ಧಾರ್ಮಿಕವಾಗಿ ಆರಾಧನೆಯ ವೃಕ್ಷವಾಗಿದೆ.
ಹಿಂದೂ ಸಂಘಟನೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡು ಆಧಾರ ಸ್ತಂಭವಾಗಿದ್ದ ಸಾಮಾನ್ಯ ಕಾರ್ಯಕರ್ತ ಸಂಗಮ್ ಗಣಪತಿ ಹೆಸರನ್ನು ಸಭೆಯ ಮುಖ್ಯ ದ್ವಾರಕ್ಕೆ ಇರಿಸಲಾಗಿದೆ.
ಸಮಾಜೋತ್ಸವ ನಡೆಯುವ ಸ್ಥಳ, ನಗರದ ವಿವಿಧೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಭಾಂಗಣದ ಒಳಗೆ ಭದ್ರತೆ ದೃಷ್ಟಿಯಿಂದ 22 ಸಿಸಿಟಿವಿ ಅಳವಡಿಸಲಾಗಿದೆ.