ನವದೆಹಲಿ : ಎರಡು ವರ್ಷಗಳ ಹಿಂದೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದ ದೆಹಲಿ ಗ್ಯಾಂಗ್ ಪ್ರಕರಣ (ನಿರ್ಭಯಾ ಕೇಸ್)ದ ದೋಷಿಯ ಸಂದರ್ಶನ ಒಳಗೊಂಡ ಸಾಕ್ಷ್ಯಚಿತ್ರವನ್ನು ಕೇಂದ್ರ ಸರ್ಕಾರದ ನಿರ್ಬಂಧ ಧಿಕ್ಕರಿಸಿ ಬಿಬಿಸಿ-4 ಟೀವಿ ವಾಹಿನಿಯು ಪ್ರಸಾರ ಮಾಡಿದೆ. ಅಲ್ಲದೆ ಆ ಸಾಕ್ಷ್ಯಚಿತ್ರವನ್ನು ಜನಪ್ರಿಯ ಆನ್ ಲೈನ್ ವಿಡಿಯೋ ತಾಣ ಯೂಟ್ಯೂಬ್ ಗೂ ಅಪ್ ಲೋಡ್ ಮಾಡಿದೆ.
ಬಿಬಿಸಿಯ ಈ ಕ್ರಮದಿಂದ ಕೆಂಡಾಮಂಡಲವಾಗಿರುವ ಕೇಂದ್ರ ಸರ್ಕಾರ, ಪ್ರಸಾರದ ಒಪ್ಪಂದದ ನಿಯಮ ಉಲ್ಲಂಘನೆಯಾಗಿದೆ. ಆಕ್ಷೇಪಾರ್ಹ ಸಂಗತಿಗಳನ್ನು ಸಾಕ್ಷ್ಯಚಿತ್ರ ಒಳಗೊಂಡಿದೆ ಎಂದು ಆರೋಪಿಸಿ ಆ ವಾಹಿನಿಯ ವಿರುದ್ಧ ಲೀಗಲ್ ನೋಟಿಸ್ ಜಾರಿ ಮಾಡಿದೆ. ವಿವಾದಿತ ಸಾಕ್ಷ್ಯಚಿತ್ರವನ್ನು ವೆಬ್ ಸೈಟ್ನಿಂದ ತೆಗೆದುಹಾಕುವಂತೆ ಯೂಟ್ಯೂಬ್ ಗೆ ಗಡುವು ನೀಡಿದೆ. ಒಂದು ವೇಳೆ, ಸಾಕ್ಷ್ಯಚಿತ್ರವನ್ನು ವೆಬ್ ಸೈಟ್ ನಿಂದ ತೆಗೆಯದಿದ್ದರೆ ಯೂಟ್ಯೂಬ್ ಗೆ ದೇಶದಲ್ಲಿ ನಿರ್ಬಂಧ ಹೇರುವ ಸಾಧ್ಯತೆಯನ್ನೂ ಮುಕ್ತವಾಗಿಟ್ಟುಕೊಂಡಿದೆ. ಯೂಟ್ಯೂಬ್ ನಿಂದ ಸಾಕ್ಷ್ಯಚಿತ್ರ ತೆಗೆದು ಹಾಕಲು ಐಟಿ ಸಚಿವಾಲಯ ಕೂಡ ತಜ್ಞರ ಸಹಾಯ ಪಡೆದು ಯತ್ನಿಸುತ್ತಿದೆ.
ಆದರೆ, ಸರ್ಕಾರದಿಂದ ತನಗೆ ಯಾವುದೇ ಸೂಚನೆ ಬಂದಿಲ್ಲ ಎಂದು ಯೂಟ್ಯೂಬ್ ಹೇಳಿಕೊಂಡಿದೆ. ತಜ್ಞರು ಕೂಡ ಅಂತರ್ಜಾಲದಿಂದ ವಿಡಿಯೋ ತೆಗೆಯುವುದು ಕಷ್ಟಸಾಧ್ಯ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಇನ್ನು, ಭಾರತದಲ್ಲಿ ವಿವಾದಿತ ಸಾಕ್ಷ್ಯಚಿತ್ರ ಪ್ರಸಾರ ಮಾಡುವ ಉದ್ದೇಶ ತನಗಿಲ್ಲ ಎಂದು ಬಿಬಿಸಿ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.
ಸಾಕ್ಷ್ಯಚಿತ್ರ ಪ್ರಸಾರ ಮಾಡದಂತೆ ದೆಹಲಿ ನ್ಯಾಯಾಲಯ ನಿರ್ಬಂಧ ಹೇರಿ ಹೊರಡಿಸಿದ್ದ ಆದೇಶದ ಪ್ರತಿಯನ್ನು ಬಿಬಿಸಿ ಹಾಗೂ ಸಾಕ್ಷ್ಯಚಿತ್ರದ ಯೂಟ್ಯೂಬ್ ’ಲಿಂಕ್' ನೀಡುತ್ತಿರುವ ಆನ್ ಲೈನ್ ಸಾಮಾಜಿಕ ಜಾಲ ತಾಣಗಳಿಗೆ ರವಾನಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ದೆಹಲಿ ಗ್ಯಾಗ್ ರೇಪ್ ಪ್ರಕರಣದ ಆರೋಪಿ ಮುಕೇಶ್ ಸಿಂಗ್ ನನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಸಂದರ್ಶನಕ್ಕೆ ಒಳಪಡಿಸಿ 1 ತಾಸಿನ ವಿವಾದಿತ ಸಾಕ್ಷ್ಯಚಿತ್ರ ಇದಾಗಿದೆ. ಅತ್ಯಾಚಾರದ ವೇಳೆ ನಿರ್ಭಯಾ ಸಹಕಾರ ನೀಡಿದ್ದರೆ ಆಕೆಯನ್ನು ಕೊಲ್ಲುತ್ತಿರಲಿಲ್ಲ ಎಂದು ಮುಕೇಶ್ ಈ ಸಂದರ್ಶನದಲ್ಲಿ ತಿಳಿಸಿದ್ದಾನೆ. ಅಲ್ಲದೆ ನಿರ್ಭಯಾ ಕುರಿತು ಕೀಳು ಹೇಳಿಕೆಗಳನ್ನೂ ನೀಡಿದ್ದಾನೆ.
ಚಿತ್ರ ನಿರ್ಮಾಪಕಿ ಲೆಸ್ಲಿ ಉಡ್ವಿನ್ ಅವರು ಬಿಬಿಸಿಗಾಗಿ ಸಿದ್ಧಪಡಿಸಿಕೊಟ್ಟಿರುವ ಈ ಸಾಕ್ಷ್ಯಚಿತ್ರವನ್ನು ಮಾ.8ರ ಮಹಿಳಾ ದಿನಾಚರಣೆಯಂದು ಪ್ರಸಾರ ಮಾಡಲು ಬಿಬಿಸಿ ಉದ್ದೇಶಿಸಿತ್ತು. ಆದರೆ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿಯೇ (ಬ್ರಿಟನ್ ಕಾಲಮಾನ) ಬಿಬಿಸಿ-4 ಚಾನೆಲ್ನಲ್ಲಿ ಪ್ರಸಾರ ಮಾಡಿತು.