ನವದೆಹಲಿ : ನಮ್ಮ ಸರ್ಕಾರ ಮೊದಲ ಬಜೆಟ್ ಮಂಡಿಸುವ ಮುನ್ನ, ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಸಂಸತ್ತಿನಲ್ಲಿ ಶ್ವೇತಪತ್ರ ಮಂಡಿಸುವ ಯೋಚನೆ ಮಾಡಿದ್ದೆವು. ಆದರೆ, ರಾಷ್ಟ್ರದ ಹಿತ ಅಥವಾ ರಾಜಕೀಯದಲ್ಲಿ ಯಾವುದಾದರೂ ಒಂದನ್ನು ನಾನು ಆಯ್ಕೆ ಮಾಡಿಕೊಳ್ಳಬೇಕಿತ್ತು’ ಎಂದು ಪ್ರಧಾನಿ ನರೇಂದ್ರ ಮೋದಿ ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಆರ್ಥಿಕ ಪರಿಸ್ಥಿತಿ ಹೇಗಿದೆ ಎಂಬುದನ್ನು ಹೇಳುವುದು ರಾಷ್ಟ್ರ ಹಿತಕ್ಕೆ ವಿರುದ್ಧ ಆಗುತ್ತಿತ್ತು. ಅರ್ಥ ವ್ಯವಸ್ಥೆಗೆ ದೊಡ್ಡ ಏಟು ಬೀಳುತ್ತಿತ್ತು. ಹಾಗಾಗಿ, ರಾಜಕೀಯವಾಗಿ ನಷ್ಟವಾದರೂ ಸರಿ ಎಂದು ಹಣಕಾಸು ಸ್ಥಿತಿ ಬಗ್ಗೆ ಮೌನವಹಿಸಲು ತೀರ್ಮಾನಿಸಿದೆ ಎಂದು ಹೇಳಿದ್ದಾರೆ. ಈ ತೀರ್ಮಾನದಿಂದ ಪಕ್ಷಕ್ಕೆ ನಷ್ಟವಾಯಿತು. ನಾವು ಟೀಕೆ ಎದುರಿಸಬೇಕಾಯಿತು. ಇವೆಲ್ಲ ಮೋದಿಯ ತಪ್ಪುಗಳು ಎನ್ನಲಾಯಿತು ಎಂದು ಪ್ರಧಾನಿಯವರು ನೆನಪಿಸಿಕೊಂಡಿದ್ದಾರೆ.
ರಾಷ್ಟ್ರದ ಹಿತಕ್ಕಾಗಿ ನಾನು ರಾಜಕೀಯ ನಷ್ಟವನ್ನು ಸಹಿಸಿಕೊಂಡೆ. ಹಿಂದಿನ ಹಲವು ಸಂಗತಿಗಳು ದೇಶದಲ್ಲಿನ ಖಾಸಗಿ ಬಂಡವಾಳ ಹೂಡಿಕೆ ಮೇಲೆ ಪರಿಣಾಮ ಬೀರಿವೆ. ಬ್ಯಾಂಕ್ಗಳ ವಸೂಲಾಗದ ಸಾಲದ ವಿಷಯದಲ್ಲಿ ಆದಂತೆಯೇ, ಬಜೆಟ್ ಅಂಕಿ–ಅಂಶಗಳಲ್ಲೂ ಹಿಂದೆ ಸುಳ್ಳುಗಳು ತುಂಬಿದ್ದವು ಎಂದು ತಿಳಿಸಿದ್ದಾರೆ.
ವಸೂಲಾಗದ ಸಾಲದ ಸಮಸ್ಯೆಯನ್ನು ಇತ್ಯರ್ಥಪಡಿಸಲು ಸರ್ಕಾರ ಪ್ರಯತ್ನ ನಡೆಸಿದೆ. ಈಗ ಪರಿಸ್ಥಿತಿ ಸುಧಾರಿಸುತ್ತಿದೆ ಎಂದರು. ಪರಿಸ್ಥಿತಿ ಈಗ ಸುಧಾರಿಸುತ್ತಿರುವ ಕಾರಣ, ಹಳೆಯದರ ಬಗ್ಗೆ ಚಿಂತಿಸಬೇಕಾಗಿಲ್ಲ. ಆದರೆ, 2014ರ ಮೇ ತಿಂಗಳಲ್ಲಿ ನಾನು ಕಠಿಣ ಮಾರ್ಗ ಅನುಸರಿಸಿದೆ. ನಿಷ್ಪಕ್ಷಪಾತ ಮನಸ್ಸಿನವರು ಅಂದಿನ ಪರಿಸ್ಥಿತಿ ವಿಶ್ಲೇಷಿಸಿದರೆ ಅವರಿಗೆ ಆಶ್ಚರ್ಯ ಆಗುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.
ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸಿದ್ದಾರೆ. ಆದರೆ ಅದನ್ನೇ ರಾಜಕೀಯ ದಾಳವನ್ನಾಗಿ ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. 125 ನೇ ವರ್ಷದ ಅಂಬೇಡ್ಕರ್ ಜಯಂತಿ ಅಂಗವಾಗಿ 'ಅಂಬೇಡ್ಕರ್ ಅವರಿಗೆ ಸಂಬಂಧಪಟ್ಟ ಐದು ಪ್ರದೇಶಗಳನ್ನು 'ಪಂಚ ತೀರ್ಥ ಸ್ಥಳ'ವನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.