ನವದೆಹಲಿ : ಆಮ್ ಆದ್ಮಿ ಪಕ್ಷದ ನಿರ್ಣಾಯಕ ರಾಜಕೀಯ ಸಮಿತಿಯಿಂದ ಯೋಗೇಂದ್ರ ಯಾದವ್ ಅವರನ್ನು ವಜಾಮಾಡಬೇಕು ಎಂಬ ಆಗ್ರಹ ಕೇಳಿಬಂದ ಬೆನ್ನಲ್ಲೇ, ಪಕ್ಷದ ಆಂತರಿಕ ಲೋಕಪಾಲ ಅಡ್ಮಿರಲ್ ಎಲ್.ರಾಮದಾಸ್ ಅವರು ಆಪ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಪತ್ರ ಬರೆದಿದ್ದಾರೆ.
ಪಕ್ಷದ ಮುಖಂಡರಿಗೆ ಇ-ಮೇಲ್ ಮೂಲಕ ಪತ್ರ ಬರೆದಿರುವ ಅವರು, ಅರವಿಂದ್ ಕೇಜ್ರಿವಾಲ್ ಅವರು ಎರಡೆರಡು ಸ್ಥಾನಗಳನ್ನು ಹೊಂದಿದ್ದಾರೆ. ಪಕ್ಷದ ಸಂಚಾಲಕ ಮತ್ತು ದೆಹಲಿ ಸಿಎಂ- ಎರಡೂ ಹುದ್ದೆಗಳು ಅವರ ಬಳಿ ಇವೆ. ಇದೆಂಥ ಅಧಿಕಾರ ವಿಕೇಂದ್ರೀಕರಣ? 2ರಲ್ಲಿ ಒಂದು ಹುದ್ದೆಗೆ ಕೇಜ್ರಿವಾಲ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಲದೆ, ಕೇಜ್ರಿವಾಲ್ ಸಂಪುಟ ’ಬಾಯ್ಸ ಕ್ಲಬ್' ಇದ್ದಂತಿದೆ. ಓರ್ವ ಮಹಿಳೆಯೂ ಸಂಪುಟದಲ್ಲಿಲ್ಲ ಎಂದು ರಾಮದಾಸ್ ದೂರಿದ್ದಾರೆ.
ರಾಮದಾಸ್ ಪತ್ರದ ಹಿನ್ನೆಲೆಯಲ್ಲಿ ಪಕ್ಷದ ರಾಜಕೀಯ ಸಮಿತಿಯ 17 ಸದಸ್ಯರು ಪಕ್ಷದ ಪದಾಧಿಕಾರಿಗಳ ಪುನಾರಚನೆ ಅಧಿಕಾರವನ್ನು ಕೇಜ್ರಿವಾಲ್ ಅವರಿಗೆ ವಹಿಸಿ ನಿರ್ಣಯ ಅಂಗೀಕರಿಸಿದ್ದಾರೆ. ಅಡ್ಮಿರಲ್ ಪತ್ರದ ಹಿನ್ನೆಲೆಯಲ್ಲಿ ಸಂಚಾಲಕ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮುಂದಾದರೂ ತಕ್ಷಣಕ್ಕೆ ಈ ಪ್ರಸ್ತಾಪವನ್ನು 17 ಸದಸ್ಯರು ತಿರಸ್ಕರಿಸಿದ್ದಾರೆ.