ಮುಂಬೈ : ಆಂತರಿಕ ಕಲಹದಿಂದ ಕಳೆಗುಂದಿರುವ ಆಮ್ ಆದ್ಮಿ ಪಕ್ಷಕ್ಕೆ ಮತ್ತೊಂದು ಶಾಕ್ ಎದುರಾಗಿದ್ದು ಮಹಾರಾಷ್ಟ್ರದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ಬಿಸಿ ತಟ್ಟಿದೆ.
ಮಹಾರಾಷ್ಟ್ರ ಆಪ್ ನ ಸ್ಥಾಪಕ ಸದಸ್ಯ, ಮಾರುತಿ ಭಾಪ್ಕರ್, ಹೆಡ್ ಲೈನ್ಸ್ ಟು ಡೆಗೆ ಹೇಳಿಕೆ ನೀಡಿದ್ದು, ಪಕ್ಷದ ಹಿರಿಯ ಸದಸ್ಯರು ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಮ್ ಆದ್ಮಿ ಹೈಕಮಾಂಡ್ ವಿರುದ್ಧ ಸುಮಾರು 200 ಕ್ಕೂ ಹೆಚ್ಚು ಸದಸ್ಯರು ಅಸಮಾಧಾನಗೊಂಡಿದ್ದು ಸಾಮೂಹಿಕ ರಾಜೀನಾಮೆ ನೀಡುವ ನಿರ್ಧಾರ ತೆಗೆದುಕೊಂಡಿರುವುದಾಗಿ ಮಾರುತಿ ಭಾಪ್ಕರ್ ಹೇಳಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಪಕ್ಷದ ಸಭೆ ನಡೆಯಲಿದ್ದು, ರಾಜೀನಾಮೆ ನೀಡುವ ಬಗ್ಗೆ ಸದಸ್ಯರು ಅಧಿಕೃತ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ತಿಳಿದುಬಂದಿದೆ.
ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿದ್ದ ಆರೋಪದಡಿ ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್ ಅವರನ್ನು ಪಕ್ಷದಿಂದ ಉಚ್ಛಾಟಿಸಿರುವ ಹಿನ್ನೆಲೆಯಲ್ಲಿ ಬೇಸತ್ತಿರುವ ಮಹಾರಾಷ್ಟ್ರ ಆಪ್ ಮುಖಂಡರು ಸಾಮೂಹಿಕ ರಾಜೀನಾಮೆ ನೀಡಲು ಮುಂದಾಗಿದ್ದಾರೆ.