ಬೆಂಗಳೂರು : ಸರ್ಕಾರಿ ವೈದ್ಯರ ರಾಜೀನಾಮೆಯನ್ನು ಅಂಗೀಕರಿಸುವುದಿಲ್ಲ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಷ್ಕರ ಕೈಬಿಟ್ಟು ಸೇವೆಯಲ್ಲಿ ತೊಡಗಿಕೊಳ್ಳಿವಂತೆ ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ವೈದ್ಯರ ಸಾಮೂಹಿಕ ರಾಜೀನಾಮೆಯನ್ನು ಅಂಗೀಕರಿಸುವುದಿಲ್ಲ. ಅವರ ಬೇಡಿಕೆಗಳ ಬಗ್ಗೆ ಚರ್ಚಿಸಲು ಮಾತುಕತೆಗೆ ಬರುವಂತೆ ಆಹ್ವಾನಿಸಲಾಗಿದೆ ಎಂದರು.
ರಾಜೀನಾಮೆ ನೀಡಿರುವ ವೈದ್ಯರ ಜತೆ ಅ.29ರಂದು ಮಧ್ಯಾಹ್ನ 3:30ಕ್ಕೆ ಸಭೆ ನಡೆಸಲಾಗುವುದು. ಅನಗತ್ಯವಾಗಿ ನಡೆಸುತ್ತಿರುವ ಮುಷ್ಕರ ಕೈಬಿಟ್ಟು ಮಾತುಕತೆಗೆ ಬರಬೇಕು. ಮುಷ್ಕರ ಮುಂದುವರೆಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದಿದರು.
ವೈದ್ಯರ ಜತೆ ಆರೋಗ್ಯ ಸಚಿವ ಯು.ಟಿ.ಖಾದರ್ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಅವರ ಬೇಡಿಕಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಸರ್ಕಾರಿ ವೈದ್ಯರಿಗೂ ಜವಾಬ್ದಾರಿಗಳಿವೆ. ಚಿಕಿತ್ಸೆ ಸಿಗದಿದ್ದರೆ ಜನರು ಸರ್ಕಾರವನ್ನಷ್ಟೇ ದೂಷಿಸುವುದಿಲ್ಲ, ವೈದ್ಯರನ್ನೂ ದೂಷಿಸುತ್ತಾರೆ ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ಸಚಿವ ಯು.ಟಿ.ಖಾದರ್, ವೈದ್ಯರ ಸಂಘದ ಪದಾಧಿಕಾರಿಗಳ ನಡುವೆಯೇ ಭಿನ್ನಾಭಿಪ್ರಾಯವಿದೆ. ಮೊದಲು ಅದನ್ನು ಬಗೆಹರಿಸಬೇಕಿದೆ. ವೈದ್ಯರ ಜತೆ ಯಾವುದೇ ಸಂಘರ್ಷವಿಲ್ಲ, ಬೇಡಿಕಗಳನ್ನು ಈಡೇರಿಸಲು ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದಾರೆ.