ನವದೆಹಲಿ : ಫೆ.28ರಂದು ನಾಗ್ಪುರದಲ್ಲಿ ನಡೆಯಲಿರುವ ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಓವೈಸಿ ರ್ಯಾಲಿಗೆ ಅನುಮತಿ ನೀಡಬಾರದು ಎಂದು ಬಿಜೆಪಿ ಹಾಗೂ ಶಿವಸೇನೆ ಒತ್ತಾಯಿಸಿವೆ.
ಮಹಾರಾಷ್ಟ್ರದ ವಿದರ್ಭ ಪ್ರದೇಶದಲ್ಲಿ ನಡೆಯಲಿರುವ ಅಸಾವುದ್ದೀನ್ ಓವೈಸಿಯ ಮೊದಲ ರ್ಯಾಲಿ ಇದಾಗಿದ್ದು, ಓವೈಸಿಯ ಪ್ರಥಮ ರ್ಯಾಲಿಗೆ ಬಿಜೆಪಿ, ಶಿವಸೇನೆಯಿಂದ ತೀವ್ರ ವೀರೊಧ ವ್ಯಕ್ತವಾಗಿದೆ.
ಮಹಾರಾಷ್ಟ್ರದಲ್ಲಿ ನೆಲೆ ಕಂಡುಕೊಳ್ಳಲು ನಿರಂತರ ರ್ಯಾಲಿಗಳನ್ನು ಹಮ್ಮಿಕೊಳ್ಳಲು ಎಐಎಂಐಎಂ ನಿರ್ಧರಿಸಿದೆ. ನಾಗಪುರದಲ್ಲಿ ನಡೆಯಲಿರುವ ರ್ಯಾಲಿಗೆ ಪಕ್ಷದಿಂದ ಈಗಾಗಲೇ ಎಲ್ಲಾ ರೀತಿಯ ಅನುಮತಿಗಳನ್ನು ಪಡೆಯಲಾಗಿದೆ ಎಂದು ಎಐಎಂಐಎಂ ತಿಳಿಸಿದೆ.
ಪ್ರಚೋದನಕಾರಿ ಭಾಷಣ ಮಾಡುವ ಅಸಾವುದ್ದೀನ್ ಓವೈಸಿ ರ್ಯಾಲಿಗೆ ಅನುಮತಿ ನೀಡಬಾರದು ಎಂದು ಶಿವಸೇನೆ ನಿಯೋಗ, ಮಹಾರಾಷ್ಟ್ರದ ಜಂಟಿ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದೆ. ಇದೇ ವೇಳೆ ರ್ಯಾಲಿ ನಡೆಸಲು ಉದ್ದೇಶಿಸಲಾಗಿರುವ ಕ್ಷೇತ್ರದ ಬಿಜೆಪಿ ಶಾಸಕ ವಿಕಾಸ್ ಸಹ ಓವೈಸಿ ರ್ಯಾಲಿಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಪ್ರಚೋದನಕಾರಿ ಭಾಷಣ ಮಾಡಿರುವ ಆರೋಪವಿರುವ ಹಿನ್ನೆಲೆಯಲ್ಲಿ ಫೆ.20ರಂದು ಬೆಂಗಳೂರಿನ ಶಿವಾಜಿನಗರದಲ್ಲಿ ನಡೆಯಬೇಕಿದ್ದ ಓವೈಸಿ ಸಾರ್ವಜನಿಕ ಭಾಷಣವನ್ನು ಸಹ ರಾಜ್ಯದ ಕಾಂಗ್ರೆಸ್ ಸರ್ಕಾರ ರದ್ದುಗೊಳಿಸಿತ್ತು.