ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಉತ್ತಮವಾದ ಆಡಳಿತ ನೀಡುತ್ತಿದೆ. ಮೋದಿ ಆಡಳಿತಲ್ಲಿ ಭಾರತೀಯ ಸೇನೆ ಸಾಕಷ್ಟು ಬಲಿಷ್ಠಗೊಂಡಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ತಿಳಿಸಿದ್ದಾರೆ.
ಬಿಜೆಪಿ ಮಂಗಳೂರು ನಗರದಲ್ಲಿ ಹಮ್ಮಿಕೊಂಡಿರುವ ತಿರಂಗಾ ಯಾತ್ರೆಗೆ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಚಾಲನೆ ನೀಡಿದರು. ಬಳಿಕ ಅವರು, ವೀರರಾಣಿ ಅಬ್ಬಕ್ಕ ಬಲಿದಾನ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಾಕ್ರಮ ಉದ್ಘಾಟಿಸಿ, ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ ಮಾಡಿ, ದೀಪ ಬೆಳಗಿಸಿದರು.
ಈ ವೇಳೆ ಮಾತನಾಡಿದ ಅವರು, ದೆಹಲಿ ಆದೇಶಕ್ಕೆ ಕಾಯದೆ ಗಡಿಯಲ್ಲಿ ಯೋಧರು ಬಂದೂಕಿನಿಂದ ಉತ್ತರ ನೀಡುತ್ತಿದ್ದಾರೆ. ಈ ಹಿಂದೆ ದೇಶವನ್ನು ಬೇರೆಯದೇ ಆದ ದೃಷ್ಟಿಕೋನದಲ್ಲಿ ನೋಡಲಾಗುತ್ತಿತ್ತು. ಆದರೆ ಈಗ ಆ ದೃಷ್ಟಿಕೋನವೇ ಬದಲಾಗಿದೆ ಎಂದು ಹೇಳಿದರು.
ರಾಜ್ಯಾಧ್ಯಕ್ಷ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವ ಡಿ.ವಿ. ಸದಾನಂದ ಗೌಡ, ಸಂಸದ ನಳಿನ್ ಕುಮಾರ್, ಮೊದಲಾದವರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಅಮಿತ್ ಷಾ ಮಹಾವೀರ ವೃತ್ತದಲ್ಲಿ ಬೈಕ್ ರ್ಯಾಲಿಗೆ ಚಾಲನೆ ನೀಡಿದರು. ಸಂಸದ ನಳಿನ್ ಕುಮಾರ್ ಅವರ ಜತೆ ಅಮಿತ್ ಷಾ ಬೈಕ್ ನಲ್ಲಿ ಕುಳಿತು ಮೆರವಣಿಗೆಯಲ್ಲಿ ಸಾಗಿದರು,