ಬೆಂಗಳೂರು : 'ಎಂಐಎಂ' ಮುಖಂಡ ಅಸಾವುದ್ದೀನ್ ಓವೈಸಿಗೆ ನಿರ್ಬಂಧ ವಿಧಿಸಿರುವುದನ್ನು ಗೃಹ ಸಚಿವ ಜಾರ್ಜ್ ಸಮರ್ಥಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಓವೈಸಿ ನಗರ ಪ್ರವೇಶಕ್ಕೆ ಪೊಲೀಸ್ ಇಲಾಖೆ ನಿರ್ಬಂಧ ವಿಧಿಸಿದೆ. ಪೊಲೀಸರು ತೆಗೆದುಕೊಂಡ ಕ್ರಮದಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ ಎಂದು ಜಾರ್ಜ್ ಸ್ಪಷ್ಟಪಡಿಸಿದ್ದಾರೆ.
ಶಿವಾಜಿನಗರದ ಛೋಟಾ ಮೈದಾನದ್ಲಲಿ ಫೆ.21ರಂದು ನಡೆಯಲಿರುವ ಎಂಐಎಂ ಸಮಾವೇಶದಲ್ಲಿ ಭಾಗವಹಿಸಲು ಹೈದ್ರಾಬಾದ್ ಸಂಸದ ಅಸಾದುದ್ದೀನ್ ಒವೈಸಿಗೆ ನಿರ್ಬಂಧ ವಿಧಿಸಿ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಆದೇಶಿಸಿದ್ದರು.
ಫೆ.9ರಿಂದ 25ವರೆಗೆ ಅಸಾದುದ್ದೀನ್ ಓವೈಸಿ ಬೆಂಗಳೂರು ಪ್ರವೇಶಿಸುವಂತಿಲ್ಲ. ಪ್ರಚೋದನಕಾರಿ ಭಾಷಣ ಹಿನ್ನೆಲೆ ಹೊಂದಿರುವ ಓವೈಸಿ ವಿರುದ್ಧ ಹೈದ್ರಾದಾಬ್ ಮತ್ತು ಮಹಾರಾಷ್ಟ್ರದಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಪ್ರಚೋದನಾಕಾರಿ ಭಾಷಣ ಹಾಗೂ ಹೇಳಿಕೆಯಿಂದಾಗಿ ಕೋಮು ಸೌಹಾರ್ದತೆಗೆ ಧಕ್ಕೆಯಾಗುವ ಸಾಧ್ಯತೆ ಹಿನ್ನಲೆಯಲ್ಲಿ ನಿಷೇಧ ವಿಧಿಸಲಾಗಿದೆ.
ವಿಡಿಯೋ, ಆಡಿಯೋ ಸೇರಿದಂತೆ ಎಲ್ಲ ರೀತಿಯ ಭಾಷಣ ಪ್ರಸಾರ ನಿರ್ಬಂಧಿಸಲಾಗಿದೆ. ಷರತ್ತು ಉಲ್ಲಂಘಿಸಿದರೆ ಆಯೋಜಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.