Shivajinagar : ಫೆ.20ರಂದು ಬೆಂಗಳೂರಿನ ಶಿವಾಜಿನಗರದಲ್ಲಿ ನಡೆಯಬೇಕಿದ್ದ ಎಂಐಎಂ ಸಮಾವೇಶದಲ್ಲಿ ಭಾಗವಹಿಸಂದತೆ ಎಂಐಎಂ ಪಕ್ಷ ಮುಖಂಡ ಅಸಾವುದ್ದೀನ್ ಓವೈಸಿಗೆ ಬೆಂಗಳೂರು ಪೊಲೀಸರು ನಿರ್ಬಂಧ ವಿಧಿಸಿದ್ದಾರೆ.
ಕಾರ್ಯಕ್ರಮದ ಕೇಂದ್ರಬಿಂದುವಾಗಬೇಕಿದ್ದ ಪಕ್ಷದ ಮುಖಂಡನಿಗೆ ಬೆಂಗಳೂರು ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಿದ್ದ ಕಾರ್ಯಕ್ರಮವನ್ನೇ ರದ್ದುಗೊಳಿಸಲಾಗಿದೆ.
ಅಸಾವುದ್ದೀನ್ ಓವೈಸಿಗೆ ಬೆಂಗಳೂರು ಪ್ರವೇಶಿಸದಂತೆ ನಿರ್ಬಂಧ ವಿಧಿಸಿರುವುದು ಮಾತ್ರವಲ್ಲದೇ, ಕಾರ್ಯಕ್ರಮದಲ್ಲಿ ಆತನ ಭಾಷಣವನ್ನು ವಿಡಿಯೋ ಪ್ರಸಾರ ಮಾಡದಂತೆಯೂ ನಿರ್ಬಂಧ ವಿಧಿಸಲಾಗಿದೆ.
ಓವೈಸಿ ವಿರುದ್ಧ ಪ್ರಚೋದನಾಕಾರಿ ಭಾಷಣಗಳನ್ನು ಮಾಡಿರುವ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಬೆಂಗಳೂರು ಪೊಲೀಸರು ಹೇಳಿದ್ದಾರೆ.
ಶಿವಾಜಿನಗರದ ಚೋಟಾ ಮೈದಾನದಲ್ಲಿ ಫೆ.21ರಂದು ಸಮಾವೇಶ ಆಯೋಜಿಸಲಾಗಿತ್ತು. ಮುಖ್ಯ ಭಾಷಣಕಾರರಾಗಿ ಓವೈಸಿ ಅಸಾದುದ್ದೀನ್ ಆಗಮಿಸಬೇಕಿತ್ತು.
ಫೆ.8ರಂದು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವಕ್ಕೆ ಪ್ರವೀಣ್ ತೊಗಾಡಿಯಾ ಅವರ ಆಗಮನವನ್ನು ಸರ್ಕಾರ ನಿಷೇಧಿಸಿತ್ತು. ಪ್ರಚೋದನಾಕಾರಿ ಭಾಷಣ ಮಾಡುವುದರ ಮೂಲಕ ಶಾಂತಿ ಸುವ್ಯವಸ್ಥೆ ಕದಡಲಿದ್ದಾರೆ ಎಂಬ ಹಿನ್ನೆಲೆಯಲ್ಲಿ ಫೆ.5ರಿಂದ 11ರವರೆಗೆ ಬೆಂಗಳೂರು ಪ್ರವೇಶ ನಿರ್ಬಂಧಿಸಿ ನಗರ ಪೊಲೀಸ್ ಆಯುಕ್ತ ಎಂ. ಎನ್.ರೆಡ್ಡಿ ಆದೇಶ ಹೊರಡಿಸಿದ್ದರು.