ಕಾನ್ಪುರ : ಇತ್ತೀಚಿನ ದಿನಗಳಲ್ಲಿ ತಾಯಿ ಮಕ್ಕಳ ಬಗ್ಗೆ ಆರ್.ಎಸ್.ಎಸ್ ನಾಯಕರು ನಿರಂತರ ಹೇಳಿಕೆ ನೀಡಲು ಪ್ರಾರಂಭಿಸಿದ್ದಾರೆ.
ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಹ ಈ ಬಗ್ಗೆ ಹೇಳಿಕೆ ನೀಡಿದ್ದು ನಮ್ಮ ತಾಯಂದಿರು ಮಕ್ಕಳನ್ನು ಹೆರುವ ಕಾರ್ಖಾನೆಯಲ್ಲ ಎಂದು ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಹಿಂದೂ ತಾಯಿಯರು ಎಷ್ಟು ಮಕ್ಕಳನ್ನು ಹೆರಬೇಕೆಂಬ ಜಿಜ್ನಾಸೆ ಆರ್.ಎಸ್.ಎಸ್ ನಾಯಕರನ್ನು ಕಾಡುತ್ತಿತ್ತು. ಪ್ರತಿಯೊಬ್ಬ ಹಿಂದೂ ತಾಯಿಯೂ ಸಹ ಕನಿಷ್ಟ 4 ಮಕ್ಕಳಿಗೆ ಜನ್ಮ ನೀಡಬೇಕು ಎಂದು ಬಿಜೆಪಿ ಮುಖಂಡ ಸಾಕ್ಷಿ ಮಹಾರಾಜ್ ಹೇಳಿಕೆ ನೀಡಿದ್ದರು.
ಇದೀಗ ಖುದ್ದು ಆರ್.ಎಸ್.ಎಸ್ ಮುಖಂಡರೇ ಮಧ್ಯಪ್ರವೇಶಿಸಿ ಮಕ್ಕಳನ್ನು ಹಡೆಯುವ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಎಳೆದಿದ್ದು ನಮ್ಮ ತಾಯಿಯಂದಿರು ಮಕ್ಕಳನ್ನು ಹೆರುವ ಕಾರ್ಖಾನೆಯಲ್ಲ. ಆದ್ದರಿಂದ ಇಂತಿಷ್ಟೇ ಮಕ್ಕಳನ್ನು ಹೆರಬೇಕೆಂದು ಹೇಳುವುದು ತಪ್ಪು ಎಂದಿದ್ದಾರೆ.
ಮಕ್ಕಳನ್ನು ಹೆರುವ ನಿರ್ಧಾರ ಪೋಷಕರ ವೈಯಕ್ತಿಕ ವಿಷಯ. ಸಾರ್ವಜನಿಕವಾಗಿ ಹೇಳಿಕೆ ನೀಡುವಾಗ ಸಚಿವರು, ಸಂಸದರು ಯೋಚನೆ ಮಾಡಿ ಹೇಳಿಕೆ ನೀಡಬೇಕೆಂದು ಎಚ್ಚರಿಸಿದ್ದಾರೆ.
ಗಡಿ ಕಾಯುವುದಕ್ಕೆ ಒಂದು ಮಗು, ಧರ್ಮ ರಕ್ಷಣೆಗಾಗಿ ಒಂದು ಮಗು, ಮತ್ತೆರಡು ಮಕ್ಕಳನ್ನು ಕುಟುಂಬವನ್ನು ನೋಡಿಕೊಳ್ಳಲು ಹೆರಬೇಕೆಂದು ಹೇಳಿಕೆ ನೀಡುವ ಮೂಲಕ ಈ ಹಿಂದೆ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ವಿವಾದವೊಂದನ್ನು ಸೃಷ್ಟಿಸಿದ್ದರು.