ಬಾಗಲಕೋಟೆ : ಬಾಗಲಕೋಟೆಯ ಇಳಕಲ್ನ ಕಂಡ್ಗಲ್ನಲ್ಲಿ 60 ಶಾಲಾ ಮಕ್ಕಳು ಬೆಳಗ್ಗೆ ಹಾಲು ಕುಡಿದ ನಂತರ ಅಸ್ವಸ್ಥರಾದ ಘಟನೆ ವರದಿಯಾಗಿದೆ. ಇವರಲ್ಲಿ ನಾಲ್ವರು ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಕ್ಷೀರಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ಸರಕಾರ ಕೊಡುವ ಹಾಲು ವಿಷಪೂರಿತವಾಗಿತ್ತು ಎಂದು ಶಂಕಿಸಲಾಗಿದೆ.
ಮಕ್ಕಳು ಎಂದಿನಂತೆ ಬೆಳಗ್ಗೆ ಶಾಲೆಯಲ್ಲಿ ಸರ್ಕಾರದ ಕ್ಷೀರಭಾಗ್ಯ ಯೋಜನೆಯ ಹಾಲು ಸೇವನೆ ಮಾಡಿದ್ದು, ಕೆಲವೇ ಕ್ಷಣದಲ್ಲಿ ಒಬ್ಬೊಬ್ಬರಂತೆ ಅಸ್ವಸ್ಥರಾಗಿ ಅಲ್ಲೇ ಮಲಗಲಾರಂಭಿಸಿದರು. ಪರಿಸ್ಥಿತಿ ಕೈ ಮೀರುವ ಹಂತ ತಲುಪಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಶಿಕ್ಷಕರು ಸ್ಥಳೀಯರ ನೆರವಿನಿಂದ ಮಕ್ಕಳನ್ನು ಅಲ್ಲಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆದರೆ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದ ಕಾರಣ ಮಕ್ಕಳನ್ನು ಇದೀಗ ತಾಲೂಕಾ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಎಂದು ತಿಳಿದು ಬಂದಿದೆ.
ಹೆಚ್ಚಿನ ವಿವರಗಳಿಗಾಗಿ ನಿರೀಕ್ಷಿಸಿಲಾಗಿದೆ.