ನವದೆಹಲಿ : ನವದೆಹಲಿಯಲ್ಲಿ ಚರ್ಚ್ ಗಳಿಗಿಂತ ಹೆಚ್ಚು ದೇವಾಲಯಗಳು, ಗುರುದ್ವಾರಗಳ ಮೇಲೆ ದಾಳಿ ನಡೆದಿದೆ ಎಂದು ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್ ಬಸ್ಸಿ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವಾಲಯಕ್ಕೆ ದೆಹಲಿ ಪೊಲೀಸ್ ಆಯುಕ್ತರು ನೀಡಿರುವ ಮಾಹಿತಿಯ ಪ್ರಕಾರ ಕಳೆದ ವರ್ಷ ಚರ್ಚ್ ಗಳಿಗಿಂತ ಹೆಚ್ಚು ದೇವಾಲಯ, ಮಸೀದಿ, ಗುರುದ್ವಾರಗಳ ಮೇಲೆ ಹೆಚ್ಚು ದಾಳಿ ನಡೆದಿದ್ದು, ಕಳ್ಳತನ ಮಾಡಲಾಗಿದೆ ಎಂದು ತಿಳಿದುಬಂದಿದೆ.
2014ರಲ್ಲಿ 206 ದೇವಾಲಯಗಳು, 30 ಗುರುದ್ವಾರಗಳು, 14 ಮಸೀದಿಗಳು ಹಾಗೂ 3 ಚರ್ಚ್ ಗಳಲ್ಲಿ ಕಳ್ಳತನ ನಡೆದಿದೆ ಎಂದು ತಿಳಿದುಬಂದಿದೆ. ದೆಹಲಿ ಚುನಾವಣೆಗೂ ಮುನ್ನ 5 ಚರ್ಚ್ ಗಳ ಮೇಲೆ ದಾಳಿ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಕೇಂದ್ರ ಸರ್ಕಾರ ದೆಹಲಿ ಆಯುಕ್ತ ಬಸ್ಸಿ ಅವರಿಗೆ ಸೂಚನೆ ನೀಡಿತ್ತು. ಪ್ರಕರಣದ ತನಿಖೆ ವೇಳೆ ಚರ್ಚ್ ಗಳಿಗಿಂತಲೂ ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆಯೇ ಅತಿ ಹೆಚ್ಚು ದಾಳಿ ನಡೆದಿರುವುದು ಬಯಲಾಗಿದೆ.
ಚರ್ಚ್ ಗಳ ಮೇಲೆ ದಾಳಿ ನಡೆದ ಬೆನ್ನಲ್ಲೇ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿತ್ತು. ಆದರೆ ಈ ಬಗ್ಗೆ ತನಿಖೆ ನಡೆಸಿದಾಗ ಹಿಂದೂ ದೇವಾಲಯಗಳ ಮೇಲೆ ಹೆಚ್ಚು ದಾಳಿ ನಡೆದಿರುವ ಸತ್ಯ ಬಯಲಾಗಿದೆ.