ಟೊರಂಟೋ : 'ಕೆನಡಾ' ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಕೆನಡಾ ಪ್ರಧಾನಿ ಸ್ಪೀಫನ್ ಹಾರ್ಪರ್ ಅವರೊಂದಿಗೆ ಏ.17ರಂದು ಗುರುದ್ವಾರ ಹಾಗೂ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.
ಟೊರಂಟೋದಲ್ಲಿರುವ ಗುರುದ್ವಾರಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹಿಂದುತ್ವ ಧರ್ಮಕಿಂತಲೂ ಮಿಗಿಲಾಗಿ ಜೀವನ ಶೈಲಿ ಎಂದು ಹೇಳಿದ್ದಾರೆ. ಕೆನಡಾದಲ್ಲಿರುವ ಸಿಖ್ ಸಮುದಾಯದವರು ತಮ್ಮ ಪರಿಶ್ರಮದಿಂದ ಭಾರತದ ಘನತೆಯನ್ನು ಹೆಚ್ಚಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಗುರುನಾನಕ್ ಅವರ ಬೋಧನೆಗಳು ಹಾಗೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಿಖ್ ಸಮುದಾಯದ ಕೊಡುಗೆಯ ಕುರಿತು ಮಾತನಾಡಿದ ನರೇಂದ್ರ ಮೋದಿ, ಮಾನವೀಯ ಕೆಲಸಗಳು ನಡೆಯುವುದು ಅಗತ್ಯವಿದ್ದು, ತ್ಯಾಗದ ವಿಷಯದಲ್ಲಿ ಸಿಖ್ ಸಮುದಾಯದವರು ಮಾದರಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಗುರುದ್ವಾರದ ನಂತರ, ಉಭಯ ನಾಯಕರು ಲಕ್ಷ್ಮಿ ನಾರಾಯಣ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು, ಇದೇ ವೇಳೆ ಹಿಂದೂ ಧರ್ಮದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಭಾರತದ ಸರ್ವೋಚ್ಛ ನ್ಯಾಯಾಲಯ, ಹಿಂದೂ ಧರ್ಮದ ಬಗ್ಗೆ ಅತ್ಯುತ್ತಮ ವ್ಯಾಖ್ಯಾನವನ್ನು ನೀಡಿದ್ದು, ಹಿಂದುತ್ವ ಎಂಬುದು ಧರ್ಮಕ್ಕಿಂತಲೂ ಮಿಗಿಲಾಗಿ ಜೀವನ ಶೈಲಿಯ ವಿಧಾನ ಎಂದು ಹೇಳಿದೆ, ಸುಪ್ರೀಂ ಕೋರ್ಟ್ ನ ವ್ಯಾಖ್ಯಾನವನ್ನು ಸಂಪೂರ್ಣವಾಗಿ ನಂಬಿರುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ.
ಹಿಂದೂ ಧರ್ಮ, ವೈಜ್ನಾನಿಕ ಜೀವನ ಶೈಲಿಯ ಮೂಲಕ ಪ್ರಕೃತಿ, ವನ್ಯಜೀವಿಗಳ ಉಳಿವಿಗೆ ಶ್ರಮಿಸಿದೆ. ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಘೋಷಿಸುವ ಮೂಲಕ ಭಾರತದ ಯೋಗಕ್ಕೆ ವಿಶ್ವಮಾನ್ಯತೆ ದೊರೆತಿದೆ ಎಂದಿರುವ ಮೋದಿ, ಯೋಗದ ಮಹತ್ವವನ್ನು ಪಸರಿಸುವಂತೆ ಕೆನಡಾದಲ್ಲಿ ನೆಲೆಸಿರುವ ಭಾರತೀಯರಿಗೆ ಕರೆ ನೀಡಿದ್ದಾರೆ.