ಚೆನ್ನೈ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ನೌಕರರು ಫೆ.25ರಿಂದ ನಾಲ್ಕು ದಿನ ಮುಷ್ಕರ ಹೂಡುವ ಸಾಧ್ಯತೆಯಿದೆ.
ಬ್ಯಾಂಕ್ ಗಳ ಸಂಘಟನೆ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಶನ್ ಮುಂದಿಟ್ಟಿರುವ ಶೇ. 13 ವೇತನ ಏರಿಕೆ ಪ್ರಸ್ತಾಪ ನೌಕರರ ಯೂನಿಯನ್ ಗಳಿಗೆ ಸಮ್ಮತವಾಗಿಲ್ಲ. ಈ ಹಿನ್ನೆಲೆಯಲ್ಲಿ ಚೆನ್ನೈಯಲ್ಲಿ ನಡೆದ ಯೂನಿಯನ್ ಗಳ ಸಭೆಯಲ್ಲಿ ಫೆ.25ರಿಂದ ನಾಲ್ಕು ದಿನ ಸತತ ಮುಷ್ಕರ ಹೂಡುವ ಎಚ್ಚರಿಕೆ ನೀಡಿದ್ದಾರೆ.
ಫೆ.25ರ ನಂತರವೂ ವೇತನ ಏರಿಸುವ ಬೇಡಿಕೆ ಈಡೇರದಿದ್ದರೆ ಮಾ.16ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹೂಡುವ ಬಗ್ಗೆ ಯೂನಿಯನ್ ಗಳು ಚರ್ಚಿಸಿವೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಮಧ್ಯ ಪ್ರವೇಶಿಸಿ ನೌಕರರ ಬೇಡಿಕೆಯನ್ನು ಈಡೇರಿಸಲು ಸಹಕರಿಸಬೇಕೆಂದು ಯೂನಿಯನ್ ಗಳು ಒತ್ತಾಯಿಸಿವೆ.
ಫೆ.20ರಂದು ದಿಲ್ಲಿಯಲ್ಲಿ ಮುಖ್ಯ ಕಾರ್ಮಿಕ ಆಯುಕ್ತರು ಸಭೆ ಕರೆದಿದ್ದು, ಈ ಸಭೆಯಲ್ಲಿ ವಿವಾದ ಇತ್ಯರ್ಥಗೊಳ್ಳದಿದ್ದರೆ ಫೆ.25ರಿಂದ ತೊಡಗಿ ನಾಲ್ಕು ದಿನ ನೌಕರರು ಮುಷ್ಕರ ಹೂಡುವುದು ಖಚಿತವಾಗಿದೆ.