ವಾಷಿಂಗ್ಟನ್ : ಜಾಗತಿಕ ರಂಗದಲ್ಲಿ ಭಾರತದ ಆರ್ಥಿಕತೆ, ಅಂಧರ ರಾಜ್ಯದಲ್ಲಿ ಒಕ್ಕಣ್ಣ ಅರಸನಂತೆ ಎಂದು ಆರ್.ಬಿ.ಐ ಗವರ್ನರ್ ರಘುರಾಮ ರಾಜನ್ ಹೇಳಿದ್ದಾರೆ.
ವಿಶ್ವ ಬ್ಯಾಂಕ್ ಮತ್ತು ಐಎಂಎಫ್ ಹಾಗೂ ಜಿ20 ವಿತ್ತ ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್ ಗಳ ಸಭೆಯಲ್ಲಿ ಪಾಲ್ಗೊಳ್ಳಲು ವಾಷಿಂಗ್ಟನ್ ಗೆ ಆಗಮಿಸಿರುವ ರಘುರಾಮ ರಾಜನ್ ಸುದ್ದಿಗಾರರ ಜತೆ ಮಾತನಾಡುತ್ತಾ, ಭಾರತವು ವಿಶ್ವ ಆರ್ಥಿಕ ರಂಗದಲ್ಲಿ ಒಂದು ತೃಪ್ತಿಕರ ಸ್ಥಾನ ಪಡೆಯುವುದಕ್ಕೆ ನಾವಿನ್ನೂ ಸಾಗಬೇಕಾದ ಹಾದಿ ಬಹುದೂರವಿದೆ. ಆದರೆ ನಾನೊಂದು ಮಾತನ್ನು ಹೇಳಬೇಕಿದೆ. ಭಾರತದ ಆರ್ಥಿಕತೆ ಹೇಗೆಂದರೆ ಅಂಧರ ರಾಜ್ಯದಲ್ಲಿ ಅದು ಒಕ್ಕಣ್ಣಿನ ಆರಸ ಇದ್ದಂತೆ ಎಂದು ಮಾರ್ಮಿಕವಾಗಿ ನುಡಿದರು.
ಮಧ್ಯಮ ಅವಧಿಯ ಪ್ರಗತಿ ಸಾಧಿಸುವತ್ತ ನಾವೀಗ ಹೊರಳುತ್ತಿದ್ದೇವೆ. ಅದರ ಪ್ರಕಾರವೇ ವಿಶ್ವ ಆರ್ಥಿಕ ವಿದ್ಯಮಾನಗಳು ಘಟಿಸುತ್ತಿವೆ. ವಿದೇಶೀ ಹೂಡಿಕೆಗಳು ಈಗ ನಮ್ಮತ್ತ ಧಾವಿಸಿ ಬರುತ್ತಿವೆ. ಭಾರತವು ಸ್ಥೂಲ ಸ್ಥಿರತೆಯತ್ತ ಸಾಗುತ್ತಿದೆ. ಹಾಗಿದ್ದರೂ ನಾವು ಜಾಗತಿಕ ಆರ್ಥಿಕ ದುರಿತಗಳ ಆಘಾತದಿಂದ ಪೂರ್ಣವಾಗಿ ಹೊರಗುಳಿಯುವಂತಿಲ್ಲ. ಕೆಲವೊಂದು ಆಘಾತಗಳನ್ನು ತಾಳಿಕೊಳ್ಳುವ ಕ್ಷಮತೆಯನ್ನು ನಾವು ಹೊಂದಿದ್ದೇವೆ ಎಂದು ಅಭಿಪ್ರಾಯಪಟ್ಟರು.