ನವದೆಹಲಿ : ಅಧೀನ ಬ್ಯಾಂಕ್ಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಜತೆ ವಿಲೀನಗೊಳಿಸುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ದೇಶವ್ಯಾಪಿ ಬ್ಯಾಂಕ್ ನೌಕರರು ಇಂದು ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದ್ದಾರೆ.
ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ (ಯುಎಫ್ಬಿಯು) ಕರೆ ಕೊಟ್ಟಿರುವ ದೇಶವ್ಯಾಪಿ ಮುಷ್ಕರಕ್ಕೆ ಇಂಡಿಯನ್ ನ್ಯಾಷನಲ್ ಬ್ಯಾಂಕ್ ಎಂಪ್ಲಾಯೀಸ್ ಫಡೆರೇಷನ್ ಇದರ ಕರ್ನಾಟಕ ರಾಜ್ಯ ಘಟಕ ಬೆಂಬಲ ಸೂಚಿಸಿದ್ದರಿಂದ ಕರ್ನಾಟಕದ ಎಲ್ಲ ಬ್ಯಾಂಕ್ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ರಾಜ್ಯಾದ್ಯಂತ ಬ್ಯಾಂಕ್ ವಹಿವಾಟು ಸ್ಥಗಿತಗೊಂಡಿದೆ.
ಒಂಬತ್ತು ಬ್ಯಾಂಕ್ಗಳ ಉದ್ಯೋಗಿಗಳು ಮತ್ತು ಅಧಿಕಾರಿಗಳ ಸಂಘಟನೆಯ ಈ ಸಂಯುಕ್ತ ವೇದಿಕೆಯು 8 ಲಕ್ಷ ಸಿಬ್ಬಂದಿ ಪ್ರತಿನಿಧಿಸುತ್ತಿದೆ. ಈ ಎಲ್ಲಾ ಬ್ಯಾಂಕ್ ಸಂಘಟನೆಗಳ ಏಕೀಕೃತ ಒಕ್ಕೂಟ ಮುಷ್ಕರಕ್ಕೆ ಕರೆ ನೀಡಿದೆ. ಸಿಬ್ಬಂದಿ ಮುಷ್ಕರದಿಂದಾಗಿ ಹಣ ಠೇವಣಿ ಇಡುವ, ಹಿಂದೆ ಪಡೆಯುವ, ಚೆಕ್ ಕ್ಲಿಯರನ್ಸ್ ಮತ್ತಿತರ ಬ್ಯಾಂಕಿಂಗ್ ವಹಿವಾಟಿಗೆ ಧಕ್ಕೆ ಒದಗಲಿದೆ.
ಅಖಿಲ ಭಾರತ ಸ್ಟೇಟ್ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಖಿಲ ಭಾರತ ಸಿಬ್ಬಂದಿ ಒಕ್ಕೂಟವೂ ‘ಯುಎಫ್ಬಿಯು’ದ ಸದ ಸ್ಯತ್ವ ಹೊಂದಿರುವುದರಿಂದ ವಹಿವಾ ಟಿಗೆ ಧಕ್ಕೆ ಒದಗಲಿದೆ ಎಂದು ಎಸ್ಬಿಐ ತಿಳಿಸಿದೆ.
ಮುಖ್ಯ ಕಾರ್ಮಿಕ ಆಯುಕ್ತರ ಜೊತೆ ಇದೇ ಜುಲೈ 26ರಂದು ನಡೆದ ಸಂಧಾನ ಸಭೆ ವಿಫಲವಾದ ಹಿನ್ನಲೆಯಲ್ಲಿ ಮುಷ್ಕರ ನಡೆಸುವುದು ಅನಿವಾರ್ಯವಾಗಿದೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟದ (ಎಐಬಿ ಇಎ) ಪ್ರಧಾನ ಕಾರ್ಯದರ್ಶಿ ಸಿ. ಎಚ್. ವೆಂಕಟಾಚಲಂ ಅವರು ತಿಳಿಸಿದ್ದಾರೆ.