ನವದೆಹಲಿ : ದೆಹಲಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ತೀವ್ರ ಮುನ್ನಡೆ ಸಾಧಿಸಿದ್ದು, ಬಿಜೆಪಿಗೆ ಭಾರೀ ಮುಖಭಂಗವಾಗಿದೆ.
ಇನ್ನು ಕೆಲವೇ ಸಮಯದಲ್ಲಿ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ಈ ನಡುವೆ ಬಿಜೆಪಿ ಹಿನ್ನಡೆ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ಸತೀಶ್ ಉಪಾಧ್ಯಾಯ, ದೆಹಲಿಯಲ್ಲಿ ಬಿಜೆಪಿ ಸೋಲನ್ನು ಒಪ್ಪಿಕೊಂಡಿದೆ. ಆಪ್ ಗೆಲುವಿಗೆ ಅಭಿನಂದನೆ ಸಲ್ಲಿಸುತ್ತೇವೆ. ಬಿಜೆಪಿ ಸೋಲಿಗೆ ಸಾಮೂಹಿಕ ಹೊಣೆ ಹೋರುವುದಾಗಿ ಹೇಳಿಕೆ ನೀಡಿದ್ದಾರೆ.
ಇನ್ನೊಂದೆಡೆ ಬಿಜೆಪಿ ಹಿನ್ನಡೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವ್ಯಕ್ತವಾಗಿರುವ ಜನಾಭಿಪ್ರಾಯವಲ್ಲ ಎಂದು ಬಿಜೆಪಿಯ ಮುಖ್ಯಮಂತ್ರಿ ಹುದ್ದೆ ಅಭ್ಯರ್ಥಿ ಕಿರಣ್ ಬೇಡಿ ಹೇಳಿದ್ದಾರೆ.
ದೆಹಲಿ ಸಂಪೂರ್ಣ ವಿಭಿನ್ನ. ಆ ಪ್ರಕಾರ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ನೀಡಿರುವ ಜನಾದೇಶವು ದೆಹಲಿಗೆ ಮಾತ್ರವೇ ಸೀಮಿತವಾಗಿದ್ದು, ಇದು ಪ್ರಧಾನಿ ವಿರುದ್ಧದ ಜನಾದೇಶವೆಂದು ತಿಳಿಯುವ ಅಗತ್ಯವಿಲ್ಲ ಎಂದು ಬೇಡಿ ತಿಳಿಸಿದ್ದಾರೆ.
ಕಿರಣ್ ಬೇಡಿ ಕಣಕ್ಕಿಳಿಸಿ ನಾವು ತಪ್ಪು ನಿರ್ಧಾರ ಮಾಡಿಲ್ಲ. ದೆಹಲಿ ಜನತೆ ಆಮ್ ಆದ್ಮಿ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ. ಹೀಗಾಗಿ ಆಪ್ ಗೆ ಶುಭಕೋರುವುದಾಗಿ ಬಿಜೆಪಿ ತಿಳಿಸಿದೆ.
ಪ್ರಸ್ತುತ ವರದಿಯ ಪ್ರಕಾರ, ಆಮ್ ಆದ್ಮಿ ಪಕ್ಷ 65 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 4, ಕಾಂಗ್ರೆಸ್ ೦ ಸಾಧನೆ, ಇತರೆ 1 ಸ್ಥಾನಗಳಲ್ಲಿ ಮುನ್ನಡೆಯಲ್ಲಿವೆ.