ಪಾಟ್ನಾ : ಬಿಹಾರದಲ್ಲಿ ರಾಜಕೀಯ ಹೈಡ್ರಾಮಾ ಮುಂದುವರೆದಿದೆ. ಶಾಸಕಾಂಗ ಪಕ್ಷದ ನಾಯಕರಾಗಿ ನಿತೀಶ್ ಕುಮಾರ್ ಆಯ್ಕೆಯಾಗಿರುವುದು ಅಸಂವಿಧಾನಿಕ ಎಂದು ಸಿಎಂ ಜೀತನ್ ರಾಂ ಮಾಂಝಿ ಗುಡುಗಿದ್ದಾರೆ.
ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿತೀಶ್ ಕುಮಾರ್ ವಿಧಾನಸಭೆ ಸದಸ್ಯರಲ್ಲ. ,ಶಾಸಕಾಂಗ ಪಕ್ಷದ ನಾಯಕರಾಗಿ ನಿತೀಶ್ ಕುಮಾರ್ ಆಯ್ಕೆ ಅಸಂವಿಧಾನಿಕ ಎಂದರು.
ಬಹುಮತ ಸಾಬೀತುಪಡಿಸಲು ನಾನು ಸಿದ್ಧನಾಗಿದ್ದೇನೆ. ರಾಜ್ಯಪಾಲರು ಸೂಚಿಸಿದರೆ ವಿಧಾನಸಭೆಯಲ್ಲೇ ಬಹುಮತ ಸಾಬೀತುಪಡಿಸುವೆ. ಬಹುಮತ ಸಾಬೀತು ಪಡಿಸುವ ವೇಳೆ ಬ್ಯಾಲೆಟ್ ಪೇಪರ್ ಮೂಲಕ ಗುಪ್ತ ಮತದಾನ ನಡೆಯಲಿ ಎಂದು ಆಗ್ರಹಿಸಿದ್ದಾರೆ.
ಎರಡೂ ಬಣಕ್ಕೂ ಪ್ರತ್ಯೇಕವಾದ ಚುನಾವಣಾಧಿಕಾರಿಗಳು ಮತದಾನದ ವೇಳೆ ಉಪಸ್ಥಿತರಿರಲಿ. ಈ ಎಲ್ಲಾ ವಿಚಾರಗಳ ಬಗ್ಗೆ ರಾಜ್ಯಪಾಲರ ಜತೆ ಚರ್ಚೆ ನಡೆಸಿದ್ದೇನೆ. ಇನ್ನು ಜೆಡಿಯುನಿಂದ ಉಚ್ಛಾಟನೆ ಮಾಡಿರುವ ಬಗ್ಗೆ ನನಗೆ ಅಧಿಕೃತ ಆದೇಶ ಬಂದಿಲ್ಲ ಎಂದು ಮಾಂಝಿ ಹೇಳಿದ್ದಾರೆ.
ಈ ನಡುವೆ ಮಾಜಿ ಸಿಎಂ ನಿತೀಶ್ ಕುಮಾರ್ ಗೆ ಮಿತ್ರಪಕ್ಷಗಳು ಬೆಂಬಲ ಘೋಷಿಸಿದ್ದು, ಆರ್ ಜೆ ಡಿ, ಕಾಂಗ್ರೆಸ್ ಹಾಗೂ ಸಿಪಿಐ ಪಕ್ಷಗಳು ಜೆಡಿಯುಗೆ ಬೆಂಬಲ ವ್ಯಕ್ತಪಡಿಸಿವೆ.
ಶರದ್ ಯಾದವ್ ನೇತೃತ್ವದಲ್ಲಿ 130 ಶಾಸಕರೊಂದಿ ಜೆಡಿಯು ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿದೆ. ಈ ವೇಳೆ, ನೂತನ ಸರ್ಕಾರ ರಚನೆಗೆ ಅವಕಾಶ ಕೋರಿದ್ದಾರೆ. ಒಂದು ವೇಳೆ ಅನುಮತಿ ನೀಡದಿದ್ದಲ್ಲಿ ರಾಷ್ಟ್ರತಿ ಬಳಿ ತೆರಳಿ 130 ಶಾಸಕರ ಪರೇಡ್ ನಡೆಸುವುದಾಗಿ ನಿತೀಶ್ ಕುಮಾರ್ ತಿಳಿಸಿದ್ದಾರೆ.