ಪಾಟ್ನಾ : ಬಿಹಾರ ರಾಜಕೀಯ ಬಿಕ್ಕಟ್ಟಿಗೆ ಫೆ.20ರಂದು ತೆರೆ ಬೀಳಲಿದ್ದು, ಏತನ್ಮಧ್ಯೆ ಜೆಡಿಯುನಿಂದ ಬಂಡಾಯವೆದ್ದಿದ್ದ 8 ಮಂದಿ ಶಾಸಕರಿಗೆ ವಿಶ್ವಾಸಮತ ಸಂದರ್ಭದಲ್ಲಿ ಮತ ಚಲಾಯಿಸದಂತೆ ಪಾಟ್ನಾ ಹೈಕೋರ್ಟ್ ನಿರ್ಬಂಧ ವಿಧಿಸಿರುವುದು ಬಿಹಾರ ಮುಖ್ಯಮಂತ್ರಿ ಜೀತನ್ ರಾಂ ಮಾಂಝಿಗೆ ದೊಡ್ಡ ಹಿನ್ನಡೆ ಉಂಟುಮಾಡಿದೆ.
ಪಾಟ್ನಾ ಹೈಕೋರ್ಟ್ ನ ದ್ವಿಸದಸ್ಯ ಪೀಠ ನೀಡಿರುವ ಈ ಆದೇಶ ನಾಳೆ ಬಿಹಾರ ಅಸೆಂಬ್ಲಿಯಲ್ಲಿ ನಡೆಯಲಿರುವ ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಮಾಂಝಿಗೆ ಕಂಟಕವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ 8 ಮಂದಿ ಸೇರಿದಂತೆ ತನಗಿರುವ ಬೆಂಬಲವನ್ನು ಸಂಜೆ ಬಲಪ್ರದರ್ಶಿಸಲು ಮಾಂಝಿ ನಿರ್ಧರಿಸಿದ್ದರು. ಅಷ್ಟೇ ಅಲ್ಲ ಕ್ಯಾಬಿನೆಟ್ ಸಭೆಯನ್ನು ಕೂಡಾ ಕರೆದಿದ್ದರು. ಆದರೆ ಇದೀಗ ಮಾಂಝಿ ಬೆಂಬಲಿತ 8 ಮಂದಿ ಜೆಡಿಯು ಸದಸ್ಯರು ಮತದಾನ ಮಾಡುವಂತಿಲ್ಲ ಎಂಬ ಹೈಕೋರ್ಟ್ ಆದೇಶ ಮಾಂಝಿಗೆ ದೊಡ್ಡ ಹೊಡೆತವಾಗಿ ಪರಿಣಮಿಸಿದೆ.